ADVERTISEMENT

ಗುಣಮಟ್ಟದ ಕಾಮಗಾರಿ ಕೊರತೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 5:57 IST
Last Updated 6 ಜೂನ್ 2017, 5:57 IST
ಬಸವನಹಳ್ಳಿ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ನಿರ್ಮಿಸಿರುವ ತಾತ್ಕಾಲಿಕ ಶೆಡ್ , ಶೌಚಾಲಯಗಳನ್ನು ಆಯುಕ್ತ ಮಣಿವಣ್ಣನ್ ಪರಿಶೀಲಿಸಿದರು
ಬಸವನಹಳ್ಳಿ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ನಿರ್ಮಿಸಿರುವ ತಾತ್ಕಾಲಿಕ ಶೆಡ್ , ಶೌಚಾಲಯಗಳನ್ನು ಆಯುಕ್ತ ಮಣಿವಣ್ಣನ್ ಪರಿಶೀಲಿಸಿದರು   

ಕುಶಾಲನಗರ: ದಿಡ್ಡಳ್ಳಿ ನಿರಾಶ್ರಿತರಿಗೆ ಬಸವನಹಳ್ಳಿಯಲ್ಲಿ ಪುನರ್ವಸತಿ ನಿಮಿತ್ತ ಒದಗಿಸಿರುವ ಮೂಲ ಸೌಲಭ್ಯ ಬಗ್ಗೆ ಸೋಮವಾರ ಗಿರಿಜನ ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದರು.

ಪುನರ್ವಸತಿ ಸೌಲಭ್ಯ ಗಮನಿಸಲು ಸ್ಥಳಕ್ಕೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಮಣಿವಣ್ಣನ್‌ ಅವರ ಎದುರೇ ಅಸಮಾಧಾನ ಹೊರಹಾಕಿದ ಗಿರಿಜನ ನಿರಾಶ್ರಿತರು ವಿವಿಧ ಸಮಸ್ಯೆಗಳನ್ನು ಅಧಿಕಾರಿ ಮುಂದೆ ಹೇಳಿಕೊಂಡರು.

ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಅಧಿಕಾರಿ ಪುನರ್ವಸತಿ ಕಲ್ಪಿಸಿರುವ ಕೂಡಿಗೆ ಬಳಿಯ ಬ್ಯಾಡಗೂಟ್ಟದಲ್ಲಿ ರಾತ್ರಿ ಹಾಡಿ ವಾಸ್ತವ್ಯ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

ADVERTISEMENT

ಗಿರಿಜನ ಮುಖಂಡ ಸ್ವಾಮಿ ಅವರು, ‘ಪುನರ್ವಸತಿ ನಿಮಿತ್ತ ನಿರ್ಮಿಸಿರುವ ಮನೆಗಳಿಗೆ ಎರಡು ಬಾಗಿಲು ಹಾಗೂ ಮರದ ಕಿಟಕಿ ಬೇಕು’ ಎಂಬ ಬೇಡಿಕೆ ಇಟ್ಟರು.

ಬಸವನಹಳ್ಳಿ ಪುನರ್ವಸತಿ ಕಲ್ಪಿಸಿರುವ ಎಲ್ಲ 180 ಕುಟುಂಬಗಳಿಗೂ ಇಲ್ಲಿಗೆ ಪೂರಕ ಸೌಲಭ್ಯಗಳು, ಮನೆಗಳನ್ನು ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.

ಮಂಗಳವಾರ ಸಭೆ: ಬಸವನಹಳ್ಳಿ ಹಾಗೂ ಬ್ಯಾಡಗೂಟ್ಟದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಕೈಗೊಂಡಿರುವ     ತಾತ್ಕಾಲಿಕ ವ್ಯವಸ್ಥೆ ಹಾಗೂ ಮುಂದೆ ಜಾರಿಗೊಳಿಸಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಿರಿಜನರಿಂದ ಅಭಿಪ್ರಾಯ ಆಲಿಸಲು ಮಂಗಳವಾರ ಸಭೆ ನಡೆಯಲಿದೆ.

ಆಯುಕ್ತರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಬಸವನಹಳ್ಳಿ ಮೊರಾರ್ಜಿ ಶಾಲೆ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಅಧಿಕಾರಿಗಳು, ಫಲಾನುಭವಿಗಳು ಭಾಗವಹಿಸುವರು.

ಪರಿಸರ ದಿನಾಚರಣೆ:  ವಿಶ್ವ ಪರಿಸರ ದಿನ ನಿಮಿತ್ತ ಗಿರಿಜನರಿಂದ ಸಸಿಗಳನ್ನು ನೆಡಿಸುವ ಮೂಲಕ ಆಯುಕ್ತರು ಪರಿಸರ ದಿನ ಕಾರ್ಯಕ್ರಮ ಆಯೋಜಿಸಿದರು.

ಜಿಲ್ಲಾಧಿಕಾರಿ ಡಾ.ವಿನ್ಸೆಂಟ್ ಡಿಸೋಜ, ಸಹಾಯಕ ಎಂಜಿನಿಯರ್ ಸಚಿನ್, ಎಇ ಪ್ರಮೋದ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಐಟಿಡಿಪಿ ಅಧಿಕಾರಿ ಪ್ರಕಾಶ್, ಎಸಿಎಫ್ ಚಿಣ್ಣಪ್ಪ, ಕಂದಾಯ ಅಧಿಕಾರಿ ನಂದಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.