ADVERTISEMENT

ಗೆಲುವಿಗೆ ಜೆಡಿಎಸ್‌ ಕಾರ್ಯತಂತ್ರ

ಮಡಿಕೇರಿ ನಗರಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:48 IST
Last Updated 4 ಡಿಸೆಂಬರ್ 2013, 6:48 IST

ಮಡಿಕೇರಿ: ನಗರಸಭೆ ಚುನಾವಣೆ ಗೆಲ್ಲುವುದು ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದು, ಕುಂಡಾಮೇಸ್ತ್ರಿ ಯೋಜನೆ, ನಗರಸಭೆಯಲ್ಲಿ ನಡೆದಿರುವ ಅವ್ಯವಹಾರ ಸೇರಿದಂತೆ ಮತ್ತಿತರ ಸಮಸ್ಯೆಗಳ ಕುರಿತು ಹೋರಾಟ ನಡೆಸುವ ಮೂಲಕ ನಗರಸಭೆ ಚುನಾವಣೆಗೆ ಸಿದ್ಧವಾಗಬೇಕಿದೆ ಜಿಲ್ಲಾ ಜೆಡಿಎಸ್‌ ಘಟಕ ಅಧ್ಯಕ್ಷ ವಿ.ಪಿ. ಶಶಿಧರ್‌ ಕರೆ ನೀಡಿದರು.

ನಗರದಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಯುವ ಜೆಡಿಎಸ್‌ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ನಗರಸಭೆ ಚುನಾವಣೆಯಲ್ಲಿ ಬಹುಮತ ಪಡೆಯುವ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪರಿಶ್ರಮ ವಹಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಸಮಸ್ಯೆಗಳ ಕುರಿತು ಜನಾಂದೋಲನ ರೂಪಿಸುವ ಮೂಲಕ ನಾಮಪತ್ರ ಸಲ್ಲಿಕೆಯ ಸಂದರ್ಭ ಸೇರುವ ಜನರು ಮತದಾರರ­ನ್ನಾಗಿ ರೂಪಿಸಬೇಕಿದೆ ಎಂದು ಹೇಳಿದರು. 

ಪಕ್ಷದಲ್ಲಿ ಸಕ್ರಿಯವಾಗಿ ದುಡಿದವರಿಗೆ ಮಾತ್ರ ಸೂಕ್ತ ಸ್ಥಾನಮಾನ ನೀಡಿದ ಹಿನ್ನೆಲೆಯಲ್ಲಿ ಸಾಮೂಹಿಕ ರಾಜಿನಾಮೆ ನೀಡುವ ಹುನ್ನಾರದಲ್ಲಿ ಕೇವಲ ಮೂರ್‌್ನಾಲ್ಕು ಜನರು ಮಾತ್ರ ಹೊರ ಹೋಗಿದ್ದು, ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಹೇಳಿದರು.
ಪಕ್ಷ ವಿಧಾನಸಭೆ ಹಾಗೂ ಮಂಡ್ಯ ಹಾಗೂ ರಾಮನಗರದಲ್ಲಿ ನಡೆದ ಸಂಸದರ ಉಪ ಚುನಾವಣೆ­ಯಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ನಿರಾಶರಾಗುವುದು ಬೇಡ. ಅತ್ಯಲ್ಪ ಮತಗಳಿಂದ ಪಕ್ಷ ಸೋತ್ತಿದ್ದು, ಕಾರ್ಯಕರ್ತರು ಇನ್ನಷ್ಟು ಪರಿಶ್ರಮ ವಹಿಸಿದ್ದರೆ ಗೆಲುವು ಸಾಧಿಸಬಹು­ದಾಗಿದೆ ಎಂದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಬಿ.ವೈ. ರಾಜೇಶ್‌ ಮಾತನಾಡಿ, ಪಕ್ಷ ಸೋಲಿನ ಭೀತಿಯಿಂದ ಹೊರ ಬಂದು ಪಕ್ಷದ ಬಲವರ್ಧನೆಗೆ ಪ್ರತಿಯೊಬ್ಬ ಕಾರ್ಯ­ಕರ್ತರು ದುಡಿಯಬೇಕಿದೆ. ಪ್ರತಿ ದಿನ ಒಂದೊಂದು ವಾರ್ಡ್‌ನಲ್ಲಿ ಆಯ್ದ ಸದಸ್ಯರಿಗೆ ಪಕ್ಷವನ್ನು ಸಂಘಟಿಸುವ ಜವಬ್ದಾರಿ ನೀಡುವ ಜೊತೆಗೆ ಪಕ್ಷದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿಮಾಡಿ ಸೂಕ್ತ ಸ್ಥಾನ ನೀಡಬೇಕಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಮಾತನಾಡಿ, ಪಕ್ಷದೊಳಗಿರುವ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಅವರು ಸಲಹೆ ಮಾಡಿದರು.

ಪಕ್ಷದ ವಕ್ತಾರ ಮುನೀರ್‌ ಅಹಮದ್‌ ಹಾಗೂ ಜಿಲ್ಲಾ ಯುವ ಜೆಡಿಎಸ್‌ ಘಟಕ ಅಧ್ಯಕ್ಷ ಅಬ್ದುಲ್‌ ರಜಾಕ್‌ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ವತಿಯಿಂದ ಅಹಮದ್‌ ಅವರನ್ನು ರಾಜ್ಯ ಸಮಿತಿಯ ಸದಸ್ಯರ­­ನ್ನಾಗಿಸಲು ತೀರ್ಮಾನಿಸಲಾಯಿತು. ಹೇಮಂತ್‌, ಭರತ್‌ ಭೀಮಯ್ಯ, ವಿಶ್ವ, ಶ್ರೀನಿವಾಸ್‌ ಸೇರಿದಂತೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.