ADVERTISEMENT

ಗ್ರಾ.ಪಂ. ಸದಸ್ಯರ ಮೇಲೆ ಹಲ್ಲೆಗೆ ಯತ್ನ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 7:40 IST
Last Updated 10 ಜುಲೈ 2012, 7:40 IST

ಸಿದ್ದಾಪುರ: ಈಚೆಗೆ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವತಿಯಿಂದ ಬರಡಿ ಗಿರಿಜನರ ಕಾಲನಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿ ್ದ್ದದಾಗ ಸ್ಥಳ ಪರಿಶೀಲನೆಗೆ ತೆರಳಿದ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ನೆಲ್ಯಹುದಿ ಕೇರಿ ವಲಯ ಕಾಂಗ್ರೆಸ್ ಪಕ್ಷ ಸಿದ್ದಾಪುರ ಪೊಲೀಸ್ ಠಾಣೆ ಎದುರು ಸೋಮ ವಾರ ಪ್ರತಿಭಟನೆ ನಡೆಸಿತು.

ರಸ್ತೆ ಅಗಲೀಕರಣ ಸಂದರ್ಭ ಕಳೆದ ತಿಂಗಳಿನಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಹದಾ ಆಶ್ರಫ್ ಹಾಗೂ ರಹ್‌ಮತ್ ಎಂಬವರನ್ನು ಬರಡಿ ನಿವಾಸಿ ಜವರಯ್ಯ ಹಾಗೂ ಆತನ ಮಗ ರಘು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೋವಿ ತೋರಿಸಿ ಹಲ್ಲೆಗೆ ಮುಂದಾದ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು.

ರಸ್ತೆ ಅಗಲೀಕರಣಕ್ಕೆ ತಮ್ಮ ಸ್ವಾಧೀನದಲ್ಲಿರುವ ಜಮೀನನ್ನು ಬಳಸಿಕೊಳ್ಳಲಾಗಿದೆ ಎಂಬುದು ಆರೋಪಿ ಜವರಯ್ಯನವರ ವಾದ ವಾಗಿತ್ತು. ನೆಲ್ಯಹುದಿಕೇರಿಯಿಂದ ಮೆರವಣಿಗೆ ಸಾಗಿ ಬಂದ ಪ್ರತಿಭಟನಾ ಕಾರರು ಸಿದ್ದಾಪುರ ಪೋಲೀಸ್ ಠಾಣೆ ಎದುರು ಸಭೆ ಸೇರಿ ಮನವಿ ಪತ್ರ ಸಲ್ಲಿಸಿದರು. ಪ್ರಕರಣ ನಡೆದು ತಿಂಗಳು ಕಳೆದರು ಪೊಲೀಸ್ ಅಧಿಕಾರಿಗಳು ಮೌನ ವಹಿಸಿರುತ್ತಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಟಿ. ಪ್ರದೀಪ್ ಆರೋಪಿಸಿದರು. ಜವರಯ್ಯನವರ ಕೋವಿ ಲೈಸನ್ಸ್ ಹಿಂಪಡೆದು ಆತನ ಬಂದೂಕನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದರು.

ಹದಿನೈದು ದಿನಗಳ ಒಳಗಾಗಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರ ದೊಂದಿಗೆ ಪೊಲೀಸ್ ವರಿಷ್ಠಾಧಿ ಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯೆ ಕೆ.ಪಿ.ಚಂದ್ರಕಲಾ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ವೆಂಕಟೇಶ್, ವಿರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯ ಪಿ.ವಿ.ಜಾನ್ಸ್‌ಸನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಲತೀಫ್, ಕೆ.ಎಂ.ಲೋಕೇಶ್, ಕೆ.ಎಂ.ಬಿ.ಗಣೇಶ್, ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಕುಮುದಾ ಧರ್ಮಪ್ಪ, ಎಸ್‌ಸಿಎಸ್‌ಟಿ ಘಟಕದ ಅಧ್ಯಕ್ಷ ಪಾಪು ಸಣ್ಣಯ್ಯ, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಕೆ.ರಘು, ಪಕ್ಷದ ಪ್ರಮುಖರಾದ ಜೋಸೆಫ್, ಎ.ಕೆ.ಹಕೀಂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.