ಮಡಿಕೇರಿ: ರಾಜ್ಯ ಸರ್ಕಾರದ ಆದೇಶದಂತೆ ಜೂನ್ 10ರಿಂದಲೇ ಜಿಲ್ಲೆಯಲ್ಲಿ ಗುಟ್ಕಾ ನಿಷೇಧಿಸಲು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಜ್ಜಾಗಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಇಲಾಖೆ ಸಿಬ್ಬಂದಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಹಾರ ಸುರಕ್ಷತೆ ಅಧಿಕಾರಿ (ಫುಡ್ ಸೇಫ್ಟಿ ಆಫೀಸರ್ಸ್) ಸಭೆ ನಡೆಸಿ, ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಲಾಗಿದೆ.
`ಗುಟ್ಕಾ ನಿಷೇಧಿಸಬೇಕೆಂದು ಸರ್ಕಾರ ನಮಗೆ ಸೂಚನೆ ನೀಡಿದೆ. ಅದರನ್ವಯ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ನಮ್ಮ ಮೊದಲ ಆದ್ಯತೆ ಸರ್ಕಾರದ ಆದೇಶದ ಬಗ್ಗೆ ಗುಟ್ಕಾ ಮಾರಾಟಗಾರರು ಹಾಗೂ ಗುಟ್ಕಾ ಸೇವಿಸುವವರಿಗೆ ಮಾಹಿತಿ ನೀಡುವುದಾಗಿದೆ' ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ಶಿವಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಗುಟ್ಕಾ ಸೇವಿಸುವವರ ಸಂಖ್ಯೆ ಕಡಿಮೆ ಇದೆ. ಸಾಮಾನ್ಯವಾಗಿ ಇಲ್ಲಿ ಕೂಲಿ ಕಾರ್ಮಿಕರು, ತೋಟದ ಕೆಲಸಗಾರರು, ಡ್ರೈವರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸುತ್ತಿದ್ದಾರೆ. ಇವರ ಮನವೊಲಿಸಲು ಪ್ರಯತ್ನಿಸಲಾಗುವುದು. ಸರ್ಕಾರದ ನಿಷೇಧದ ಆದೇಶ ಹಾಗೂ ಗುಟ್ಕಾ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ಅವರಿಗೆ ಮನದಟ್ಟು ಮಾಡಿಕೊಡಲಾಗುವುದು' ಎಂದು ವಿವರಿಸಿದರು.
ಬೀಡಾ ಅಂಗಡಿ ಸೇರಿದಂತೆ ಎಲ್ಲ ರೀತಿಯ ಅಂಗಡಿ, ಮಳಿಗೆಗಳಿಗೆ ಭೇಟಿ ನೀಡಲಾಗುವುದು. ಗುಟ್ಕಾ ಮಾರಾಟ ಮಾಡಿದರೆ ಹಾಗೂ ಗುಟ್ಕಾ ಸಂಗ್ರಹಿಸಿಟ್ಟುಕೊಂಡರೆ ಕಾನೂನಿನಲ್ಲಿರುವ ಶಿಕ್ಷೆ ಪ್ರಮಾಣವನ್ನು ಅವರಿಗೆ ತಿಳಿಸಲಾಗುವುದು. ಆರಂಭದ ದಿನಗಳಲ್ಲಿ ತಿಳಿವಳಿಕೆ ನೀಡುವುದು ಮೊದಲ ಆದ್ಯತೆ, ಇಷ್ಟಾಗಿಯೂ ಅವರು ಸುಧಾರಿಸದಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು.
ಪಾನ್ ಮಸಾಲಗೆ ಈ ಆದೇಶವು ಅನ್ವಯವಾಗುವುದಿಲ್ಲ. ಪಾನ್ ಮಸಾಲದಲ್ಲಿ ತಂಬಾಕು, ನಿಕೋಟಿನ್ ಬಳಸಿರುವುದಿಲ್ಲ ಎಂದು ಅವರು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.