ADVERTISEMENT

ತಿಪ್ಪೆಗುಂಡಿಯಂತಾದ ಮೈಸೂರಮ್ಮನಗರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 8:06 IST
Last Updated 5 ಡಿಸೆಂಬರ್ 2012, 8:06 IST

ಗೋಣಿಕೊಪ್ಪಲು: ಗೋಣಿಕೊಪ್ಪಲು ಪಟ್ಟಣದ ಸೆರಗಿನಲ್ಲಿರುವ ಅರುವತ್ತೊಕ್ಕಲು ಗ್ರಾಮ ಕಸದ ರಾಶಿ,   ಕಿರಿದಾದ ಮತ್ತು ಹೊಂಡಬಿದ್ದ ರಸ್ತೆ, ಕುಡಿಯುವ ನೀರಿನ ಕೊರತೆ ಮೊದಲಾದ ಸಮಸ್ಯೆಗಳಿಂದ ನಲುಗುತ್ತಿದೆ.

ಮೈಸೂರಮ್ಮ ನಗರ ಎಂದು ಕರೆಸಿಕೊಳ್ಳುವ ಈ ಗ್ರಾಮದ ಹೆಬ್ಬಾಗಿಲಿನಲ್ಲೇ ಕಸದ ರಾಶಿ ಸ್ವಾಗತಿಸುತ್ತದೆ. ಜನತೆ ಕರವಸ್ತ್ರ ಮರೆತು ಹೋದರೆ ದುರ್ನಾತ ತಡೆಯದೇ ವಾಂತಿ ಮಾಡಿಕೊಳ್ಳುವಂತಾಗುತ್ತದೆ. ಇಂತಹ ರಸ್ತೆಯ್ಲ್ಲಲೇ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನಿತ್ಯವೂ ಓಡಾಡುವುದು ಅನಿವಾರ್ಯ.

ಊರಿನ ಮಂದೆ ಖಾಲಿ ಇರವ ನಿವೇಶನದಲ್ಲಿ ಕಸ ತಂದು ಸುರಿಯಲಾಗುತ್ತಿದೆ. ಇಲ್ಲಿ ದನಕರು, ನಾಯಿ, ಹಂದಿ, ಕಾಗೆಗಳೆಲ್ಲ ಕಚ್ಚಾಡಿಕೊಂಡು ಕಸದ ರಾಶಿಯನ್ನು ಎಳೆದಾಡುತ್ತಿವೆ. ಈ ಕಸ ರಸ್ತೆಗೆ ಹರಡಿ ದುರ್ವಾಸನೆ ಬೀರುತ್ತಿದೆ.

ಗುಂಡಿಗಳ ರಸ್ತೆ: ಮೈಸೂರಮ್ಮ ನಗರದ ರಸ್ತೆಗಳು ಕೂಡ ಚೆನ್ನಾಗಿಲ್ಲ. ಎಲ್ಲೆಡೆ ಹೊಂಡ ಉಂಟಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ರಸ್ತೆಗಳು ತೀರ ಕಿರಿದಾಗಿವೆ. ಕೆಲವರು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಚರಂಡಿ ಕೂಡ ಇಲ್ಲ. ಕೆಲವು ಕಡೆ ರಸ್ತೆಯ್ಲ್ಲಲೇ ಕೊಳಚೆ ನೀರು ಹರಿಯುತ್ತಿದೆ.

ಗ್ರಾಮದಲ್ಲಿರುವ ಬೋರ್‌ವೆಲ್ ಸಹ ಕೆಟ್ಟು ನಿಂತಿದೆ. ವಿದ್ಯುತ್ ಕೊರತೆಯಿಂದ ನಲ್ಲಿಯೂ ಬಂದ್ ಆಗಿವೆ. ತೆರೆದ ಬಾವಿಗಳು ನೀರಿಲ್ಲದೇ ಒಣಗಿವೆ.

ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ಇದ್ದರೂ ಕೂಡ ಗ್ರಾಮದ ಜನಪ್ರತಿನಿಧಿಗಳು ಎಲ್ಲ ಸಮಸ್ಯೆಗಳನ್ನು ನೋಡಿಕೊಂಡು ಮೌನವಾಗಿದ್ದಾರೆ. ಊರಿನ ಮುಂದೆ ಇರುವ ಕಸ ತೆಗೆಯಲು ಹೇಳಿದರೂ ಯಾರೂ ಅತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.  

ಸಾಂಕ್ರಾಮಿಕ ರೋಗ ಹರುಡುವ ಸಂಭವವೂ ಇದೆ. ಸಮೀಪದ ಮನೆಗಳಲ್ಲಿರುವ ಜನತೆ ಹಲವು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮುತ್ತಪ್ಪ. ಗ್ರಾಮದ ಸಮಸ್ಯೆಗಳನ್ನು ನಿವಾರಿಸಿ ಜನತೆಗೆ ಬೇಕಾಗಿರುವ  ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಿ ಎಂದು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿದರೂ ಅವರು ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಂತಹ ಪ್ರತಿನಿಧಿಗಳ ಅವಶ್ಯಕತೆಯಾದರೂ ಏನು ಎಂಬುದು ಗ್ರಾಮಸ್ಥರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.