ADVERTISEMENT

ದಸರಾ: ಮುದನೀಡಿದ ನೃತ್ಯ ರೂಪಕ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 5:20 IST
Last Updated 4 ಅಕ್ಟೋಬರ್ 2011, 5:20 IST

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ದಸರಾ ಜನೋತ್ಸವದ 5ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಭಾತ್ ಕಲಾವಿದರ `ಧರ್ಮ ಭೂಮಿ~ ಮತ್ತು `ಮಹಿಷಾಸುರ ಮರ್ಧಿನಿ~ ನೃತ್ಯ ರೂಪಕ ಪ್ರೇಕ್ಷಕರಿಗೆ ಮುದ ನೀಡಿತು.

ತಂಡದ ಕಲಾವಿದರು ಭರತ ಖಂಡದ ಚರಿತ್ರೆಯನ್ನು ಮನೋಜ್ಞವಾಗಿ ನೃತ್ಯ ರೂಪಕದಲ್ಲಿ ಅಭಿವ್ಯಕ್ತಿಗೊಳಿಸಿದರು. ನಟನಾ ಕೌಶಲ  ಹಾಗೂ ನೃತ್ಯ ರೂಪಕ ಜನತೆಯನ್ನು ರಂಜಿಸಿತು.

ಮಹಿಷಾಸುರ ಮರ್ಧಿನಿ ರೂಪಕ ಪ್ಷೇಕ್ಷಕರಿಗೆ ಮತ್ತಷ್ಟು ಮುದ ನೀಡಿತು. ಮಹಿಷಾಸುರನನ್ನು ಚಾಮುಂಡಿ ಸಂಹರಿಸಿದ ಕಥೆ ಉತ್ತಮವಾಗಿ ಮೂಡಿ ಬಂತು. ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಕಾವೇರಿ ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಕಳೆದ 2 ವರ್ಷಗಳಿಂದ ಸರ್ಕಾರ ಗೋಣಿಕೊಪ್ಪಲು ದಸರಾಗೆ ಅನುದಾನ ನೀಡುತ್ತಿದೆ. ಹಿಂದೆ ಜನತೆಯ ಸಹಕಾರದಿಂದ ಉತ್ಸವ ನಡೆಸಲಾಗುತ್ತಿತ್ತು ಎಂದು ನೆನಪಿಸಿಕೊಂಡರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ  ಎಂ.ಎಂ. ರವೀಂದ್ರ ಮಾತನಾಡಿ, ಸಾಂಸ್ಕೃತಿಕ ಉತ್ಸವ ಜನತೆಗೆ ಮನರಂಜನೆ ನೀಡುವುದರ ಜತೆಗೆ ಸಮಾಜದ ಸೌಹಾರ್ದತೆಗೂ ಸಹಕಾರಿ. ಇಂತಹ ಉತ್ಸವಗಳು ಆಯಾ ಸಂದರ್ಭಕ್ಕೆ ತಕ್ಕಂತೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಉದ್ಯಮಿ ಅಜಿತ್ ಅಯ್ಯಪ್ಪ, ಕಬ್ಬಚ್ಚೀರ ಪ್ರಭು ಸುಬ್ರಮಣಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಗಣಪತಿ, ಗ್ರಾಪಂ. ಸದಸ್ಯ ರಾಜಶೇಖರ್, ಸಬ್ ಇನ್‌ಸ್ಪೆಕ್ಟರ್ ಸುರೇಶ್‌ಕುಮಾರ್,  ಪೊನ್ನಿಮಾಡ ಬೋಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.