ಕುಶಾಲನಗರ: ‘ಮಾನವನ ಬಳಿ ಕೋಟಿ ಸಂಪತ್ತು ಇದ್ದರೂ ನೆಮ್ಮದಿ ಇಲ್ಲದಿದ್ದರೆ ಅಂತಹ ಸಂಪತ್ತು ವ್ಯರ್ಥ’ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಎಸ್ಎಲ್ಎನ್ ಸಂಸ್ಥೆ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ₨ 5 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡಿರುವ ಪಟ್ಟಣದ ರಾಧಾಕೃಷ್ಣ ಬಡಾವಣೆಯ ಶಾಂತಿ ಉದ್ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಎಷ್ಟೇ ಸಂಪತ್ತನ್ನು ಗಳಿಸಿದ್ದರೂ ಅದನ್ನು ಸಮಾಜದ ಒಳಿತಿಗಾಗಿ ಸದ್ವಿನಿಯೋಗಿಸದಿದ್ದರೆ ಅಂತಹ ಸಂಪತ್ತು ವ್ಯರ್ಥವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಶಿವಪ್ಪ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಇಂದು ನಗರಗಳು ಕಲುಷಿತಗೊಳ್ಳುತ್ತಿದ್ದು, ಉತ್ತಮ ಗಾಳಿಯೇ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭಗಳಲ್ಲಿ ಉದ್ಯಾನಗಳು ಅತ್ಯಗತ್ಯ ಎಂದರು.
ಇದೇ ಸಂದರ್ಭ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೈಸೂರು ಉಪವಲಯ ನಿರ್ದೇಶಕಿ ಲಕ್ಷ್ಮೀಜಿ ಅವರಿಂದ ಶಾಂತಿ– ಸಹಬಾಳ್ವೆ ಕುರಿತು ಪ್ರವಚನ ನಡೆಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಲ್ಎನ್ ಸಂಸ್ಥೆ ಸಹೋದರರಾದ ವಿಶ್ವನಾಥ್ ಮತ್ತು ಸಾಥಪ್ಪನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶರವಣಕುಮಾರ್, ಕುಶಾಲನಗರ ಈಶ್ವರೀಯ ವಿಶ್ವವಿದ್ಯಾಲಯದ ಧನಲಕ್ಷ್ಮೀ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.