ADVERTISEMENT

ನೇಗಿಲಯೋಗಿಗೆ ಬಿಡುವಿಲ್ಲದ ಕೆಲಸ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 8:35 IST
Last Updated 14 ಜೂನ್ 2011, 8:35 IST

ಕುಶಾಲನಗರ: ಮುಂಗಾರು ಮಳೆ ಮುಂದುವರಿದಂತೆ ಉತ್ತರ ಕೊಡಗಿನ ಮಳೆಯಾಶ್ರಿತ ಬಯಲು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕಾರ್ಯಗಳು ಬಿರುಸುಗೊಂಡಿವೆ.

ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿದ್ದ ಹದವಾದ ಮಳೆಯಿಂದ ರೈತಾಪಿ ವರ್ಗ ಹರ್ಷಗೊಂಡಿದೆ. ನೇಗಿಲಯೋಗಿ ರೈತ ಬಿಡುವಿಲ್ಲದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಬಯಲು ಪ್ರದೇಶದಲ್ಲಿ ಕಂಡುಬರುತ್ತಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ 2575 ಹೆಕ್ಟೇರ್ ಪ್ರದೇಶದಲ್ಲಿ ಜೋಳದ ಬಿತ್ತನೆ ಗುರಿ ಹೊಂದಲಾಗಿದೆ.ಜಿಲ್ಲೆಯಲ್ಲಿ ಅತಿ ಹೆಚ್ಚು ಮುಸುಕಿನ ಜೋಳ ಬೆಳೆಯುವ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ 1550 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಶೇ 56ರಷ್ಟು ಜೋಳದ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಮೇ ತಿಂಗಳ ಮಧ್ಯ ಭಾಗದಲ್ಲಿ ಬಿದ್ದ ಮಳೆ ಸಂದರ್ಭ ರೈತರು ತಮ್ಮ ಜಮೀನನ್ನು ಬಿತ್ತನೆಗೆ ಸಿದ್ಧಪಡಿಸಿದ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ಈ ಬಾರಿ ಮುಸುಕಿನ ಜೋಳದ ಬಿತ್ತನೆ ಕಾರ್ಯ ಆರಂಭಗೊಂಡಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ಆಶಾದಾಯಕವೆನಿಸಿದ್ದು, ಇದರಿಂದ ಪ್ರೇರಿತಗೊಂಡಿರುವ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃಷಿ ಇಲಾಖೆ ವತಿಯಿಂದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮೆಕ್ಕೆಜೋಳ, ಹಸಿರೆಲೆ ಗೊಬ್ಬರ, ಜಿಂಕ್ ಸಲ್ಫೇಟ್, ಸೆಣಬಿನ ಬೀಜವನ್ನು ಮತ್ತು ರಾಸಾಯನಿಕ ಗೊಬ್ಬರವನ್ನು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನ ಶಾಖೆಗಳ ಮೂಲಕ ರಿಯಾಯಿತಿ ದರದಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಡಾ ಎಚ್.ಎಸ್.ರಾಜಶೇಖರ್ ತಿಳಿಸಿದ್ದಾರೆ.

ಕುಶಾಲನಗರ ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ಈಗಾಗಲೇ ಪ್ಯಾರಿ ಡಿಕೆ 972, ಸಿಪಿ 818, ಕಾವೇರಿ, ಜುವಾರಿ, ಸಿ1921, ಮೆಕ್ಕೆಜೋಳದ ಬಿತ್ತನೆ ಬೀಜವನ್ನು 556 ಕ್ವಿಂಟಲ್‌ನಷ್ಟು ವಿತರಿಸಲಾಗಿದೆ. ರೈತರಿಗೆ ಈಗಾಗಲೇ ಕೃಷಿ ಇಲಾಖೆ ವತಿಯಿಂದ ಸಹಕಾರ ಸಂಘಗಳ ಮೂಲಕ ಬತ್ತದ ಬಿತ್ತನೆ ಬೀಜಗಳ ತಳಿಗಳಾದ ಐಆರ್ 64, ಐಇಟಿ 7191, ಬಿ.ಆರ್.2655, ತನು ಮುಂತಾದ ತಳಿಗಳನ್ನು ಶೇ50 ರ ರಿಯಾಯಿತಿ ದರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರ ಹೇಳಿದ್ದಾರೆ.

10 ಕ್ವಿಂಟಲ್ ಸೆಣಬಿನ ಬೀಜ, 300 ಕೆ.ಜಿ. ಲಘು ಪೋಷಕಾಂಶ   ಜಿಂಕ್ ಸಲ್ಫೇಟ್ ಅನ್ನು ರೈತರಿಗೆ ಶೇ 50ರ ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. ಹೋಬಳಿ ವ್ಯಾಪ್ತಿ  ಯಲ್ಲಿ 350 ಹೆಕ್ಟೇರ್‌ನಲ್ಲಿ ಅಲಸಂದೆ ದ್ವಿದಳ ಧಾನ್ಯ ಬೆಳೆಯಲು ಕ್ರಮ ಕೈಗೊಮಡಿದ್ದು, ರೈತರಿಗೆ ಸಿ - 52, ಸಿ -152 ತಳಿಯ ಅಲಸಂದೆ ಬಿತ್ತನೆ ಬೀಜ ವಿತರಿಸಲಾಗಿದೆ.

ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿನ  ಹಾರಂಗಿ ಮತ್ತು ಚಿಕ್ಲಿಹೊಳೆ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ 2395 ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಬಿತ್ತನೆ ಗುರಿ ಹೊಂದಲಾಗಿದೆ. ಮದಲಾಪುರ, ಹೆಬ್ಬಾಲೆ, ತೊರೆ  ನೂರು, ಅಳುವಾರ, ಹಳೇಗೋಟೆ, ಮರೂರು, 6 ನೇ ಹೊಸಕೋಟೆ, ಶಿರಂಗಾಲ, ಸಿದ್ದಲಿಂಗಪುರ ವ್ಯಾಪ್ತಿಯಲ್ಲಿ ಅಂದಾಜು 365 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.