ADVERTISEMENT

ಪೊನ್ನಂಪೇಟೆ ಕ್ಲಸ್ಟರ್: ಚಿಣ್ಣರಿಗೆ ಕೃಷಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 9:20 IST
Last Updated 3 ಡಿಸೆಂಬರ್ 2012, 9:20 IST

ಗೋಣಿಕೊಪ್ಪಲು: ತಾಲ್ಲೂಕಿನ ಮಾಯಮುಡಿ, ಪೊನ್ನಂಪೇಟೆ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಗೋಣಿಕೊಪ್ಪಲಿನ ಕಿತ್ತಳೆ ಸಹಕಾರ ಸಂಘ, ಕೃಷಿ ವಿಜ್ಞಾನ ಕೇಂದ್ರ ಮುಂತಾದ ಕಡೆಗೆ ಭೇಟಿ ನೀಡಿ ತಜ್ಞರಿಂದ ಕೃಷಿ ಮಾಹಿತಿ ಪಡೆದರು.

ವಿದ್ಯಾರ್ಥಿಗಳಿಗೆ ಕೃಷಿ ದರ್ಶನ ಕಾರ್ಯಕ್ರಮದ ಹಿನ್ನೆಯಲ್ಲಿ ಈ ಪ್ರವಾಸ ಕೈಗೊಳ್ಳಲಾಗಿತ್ತು. ಮಾಯಮುಡಿ, ಪೊನ್ನಪ್ಪಸಂತೆ , ಧನಗಾಲ, ಚೆನ್ನಂಗೊಲ್ಲಿ, ತೂಚಮಕೇರಿ, ಪೊನ್ನಂಪೇಟೆ ಹಾಗೂ ಕಿರುಗೂರು ಹಿರಿಯ ಪ್ರಾಥಮಿಕ ಶಾಲೆಗಳ 6 ಮತ್ತು 7ನೇ ತರಗತಿಯ ಒಟ್ಟು 300 ವಿದ್ಯಾರ್ಥಿಗಳು ಇದ್ದರು. ಕಿತ್ತಳೆ ಸಹಕಾರ ಸಂಘಕ್ಕೆ ಭೇಟಿ ನೀಡಿ ಕಿತ್ತಳೆ, ನಿಂಬೆ, ಟೊಮೆಟೊ, ಪಪ್ಪಾಯಿ ಮುಂತಾದ ಹಣ್ಣುಗಳ ರಸ ತಯಾರಿಕೆ ಹಾಗೂ ಅದರ ಪ್ಯಾಕಿಂಗ್ ನೋಡಿ ಆನಂದಿಸಿದರು.

ಕಿತ್ತಳೆ ಸಹಕಾರ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ವಿದ್ಯಾರ್ಥಿಗಳಿಗೆ ರಸ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು. ನಂತರ ಕೃಷಿ ವಿಜ್ಞಾನ ಕೇಂದ್ರಕ್ಕೆ ತೆರಳಿ ಅಲ್ಲಿ ಮೆಣಸು, ಕಾಫಿ, ಕಿತ್ತಳೆ, ಏಲಕ್ಕಿ, ಸಪೋಟ ನರ್ಸರಿ ಬಗೆಗೂ ತಿಳಿದುಕೊಂಡರು. ಕೇಂದ್ರದ ಅತ್ತೂರು ಕೃಷಿ ಕ್ಷೇತ್ರಕ್ಕೆ ತೆರಳಿ ಮೇಕೆ, ಕುರಿ, ಹಂದಿ ಮುಂತಾದ ಪಶುಸಂಗೋಪನೆ ಮಾಹಿತಿ ಪಡೆದರು. ಅತ್ತೂರು ಕೃಷಿ ಫಾರಂನ ಬೋಪಯ್ಯ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ಕೇಂದ್ರದಲ್ಲಿರುವ ವಿವಿಧ ಬಗೆಯ ಹಂದಿ ಮರಿಗಳನ್ನು ನೋಡಿ ವಿದ್ಯಾರ್ಥಿಗಳು ಸಂತಸ ಪಟ್ಟರು.

ಕ್ಲಸ್ಟರ್ ಸಂಪನ್ಮೂಲವ್ಯಕ್ತಿಗಳಾದ ಅಮ್ಮತ್ತೀರ ವಾಸುವರ್ಮ, ತಿರುನೆಲ್ಲಿಮಾಡ ಜೀವನ್ ವಿದ್ಯಾರ್ಥಿಗಳ ಜತೆ ಪಾಲ್ಗೊಂಡಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ `ಶಾಲೆ ಸಮುದಾಯದ ಆಸ್ತಿ, ಮಕ್ಕಳು ದೇಶದ ಆಸ್ತಿ' ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ಕೃಷಿ ವೃತ್ತಿ ಪ್ರವಾಸ ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.