ADVERTISEMENT

ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ ಸಹಕಾರಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:39 IST
Last Updated 6 ಸೆಪ್ಟೆಂಬರ್ 2013, 6:39 IST

ನಾಪೋಕ್ಲು: ಗ್ರಾಮೀಣ ಮಟ್ಟದಲ್ಲಿ ಯುವಕ ಸಂಘಗಳು ಆಯೋಜಿಸುವ ಕ್ರೀಡಾಕೂಟಗಳು ಪ್ರತಿಭೆ ಅನಾವರಣಕ್ಕೆ ಸಹಕರಿಸುವುದಲ್ಲದೆ, ಗ್ರಾಮೀಣ ಜನರಿಗೆ ಉಲ್ಲಾಸದಾಯಕ ವಾತಾವರಣವನ್ನು ಕಲ್ಪಿಸಿಕೊಡುತ್ತದೆ ಎಂದು ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಹೇಳಿದರು.

ಸಮೀಪದ ಮೇಕೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೇಕೇರಿ ಸ್ವಾಗತ ಯುವಕ ಸಂಘ, ಜಿಲ್ಲಾ ಯುವ ಒಕ್ಕೂಟ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ತಾಲ್ಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕೈಲು ಮುಹೂರ್ತ ಹಬ್ಬದ ಗ್ರಾಮೀಣ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುವ ಯುವಕ ಸಂಘಗಳಿರುವಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ. ಮೇಕೇರಿ ಗ್ರಾಮದಲ್ಲಿ ಯುವಕ ಸಂಘದಂತೆ ಯುವತಿ ಮಂಡಳಿಯ ಅವಶ್ಯಕತೆಯಿದ್ದು ಉತ್ಸಾಹಿ ಯುವತಿಯರ ಸಂಘಟನೆಯಾಗಬೇಕಿದೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಾಕತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಯು. ಹನೀಫ್ ವಹಿಸಿದ್ದರು. ಜಿಲ್ಲಾ ಯುವ ಒಕ್ಕೂಟದ ಉಪಾಧ್ಯಕ್ಷ ಎಂ.ಬಿ. ಜೋಯಪ್ಪ, ಹಾಕತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ. ದಾಮೋದರ್, ಟಿ.ಎಂ. ವಸಂತ್ ಕುಮಾರ್, ಆದಿಶಕ್ತಿ ಮಹಿಳಾ ಸಂಘದ ಅಧ್ಯಕ್ಷೆ ಇಂದಿರಾ ರೈ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಳಗರಾಜ್, ಸ್ವಾಗತ ಯುವಕ ಸಂಘದ ಅಧ್ಯಕ್ಷ ಜೆ. ಹರೀಶ್, ಉಪಾಧ್ಯಕ್ಷ ಎಸ್. ಚಂದ್ರ, ಕಾರ್ಯದರ್ಶಿ ಎಂ.ಕೆ. ಪ್ರಕಾಶ್, ಸಹಕಾರ್ಯದರ್ಶಿ ಡಿ.ಎಸ್. ಅಶೋಕ್, ಖಜಾಂಚಿ  ಟಿ.ಎನ್. ಉಮೇಶ್ ಇದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟವನ್ನು ಮೇಕೇರಿಯ ಡಿ.ಎ. ಕುಶಾಲಪ್ಪ ಉದ್ಘಾಟಿಸಿ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಜೆ. ಹರೀಶ್ ಸ್ವಾಗತಿಸಿದರು. ಲೋಕೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.