ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯದಲ್ಲಿ ಕಾಡುಗಳ್ಳರು ಮತ್ತು ವನ್ಯಜೀವಿ ಬೇಟೆಗಾರರಿಗೆ ಸಿಂಹಸ್ವಪ್ನವಾಗಿರುವ ಶ್ವಾನ ‘ರಾಣಾ’ನನ್ನು ‘ಪ್ರಿನ್ಸ್’ ಹುಲಿಯ ಸಾವಿನ ರಹಸ್ಯ ಪತ್ತೆಹಚ್ಚಲು ಅರಣ್ಯ ಇಲಾಖೆ ಬಳಸಿಕೊಳ್ಳುತ್ತಿದೆ.ಕಳೆದ ವಾರ ಪ್ರವಾಸಿಗರ ನೆಚ್ಚಿನ ಹುಲಿ ‘ಪ್ರಿನ್ಸ್’ ಸಾವಿಗೀಡಾಗಿತ್ತು. ಬೇಟೆಗೆ ಇಟ್ಟಿದ್ದ ಸಿಡಿಮದ್ದಿನಿಂದ ಮೃತಪಟ್ಟಿದೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರೆ, ಹುಲಿ ಸಹಜವಾಗಿ ಸಾವನ್ನಪ್ಪಿದೆ.
ಆದರೆ ದಾನಗಾಹಿಗಳು ಕೋಪದಿಂದ ಹುಲಿಯ ಮುಖದ ಕೆಲ ಭಾಗವನ್ನು ಬೇರ್ಪಡಿಸಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ವನ್ಯಜೀವಿ ಪ್ರಿಯರು ಪ್ರಿನ್ಸ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಉನ್ನತ ತನಿಖೆಗೆ ಆಗ್ರಹಿಸಿದ್ದರು. ಈ ಕಾರಣದಿಂದ ಅರಣ್ಯ ಇಲಾಖೆ ಹುಲಿಯ ಮೃತದೇಹವನ್ನು ಪ್ರಯೋಗಾಲಯಕ್ಕೆ ಕಳುಹಿಸಿತ್ತು.
ಮೃತ ಹುಲಿಯ ತಲೆಯ ಭಾಗ ಬೇರ್ಪಟ್ಟಿತ್ತು. ದವಡೆ ಹಲ್ಲುಗಳು ಕಾಣೆಯಾಗಿದ್ದವು. ಶ್ವಾನವನ್ನು ಬಳಸಿಕೊಂಡು ‘ಪ್ರಿನ್ಸ್’ ದೇಹದಿಂದ ಕಾಣೆಯಾಗಿದ್ದ ದವಡೆ ಹಲ್ಲುಗಳನ್ನು ಪತ್ತೆ ಹಚ್ಚಲಾಗಿದೆ.ಸಿಸಿಎಫ್ ಹೀರಾಲಾಲ್ ಅವರು ಪ್ರಿನ್ಸ್ ಹುಲಿ ಸಾವಿಗೀಡಾದ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.