ADVERTISEMENT

ಬಿಜೆಪಿ ನಾಯಕರ ಹೇಳಿಕೆ ಹಾಸ್ಯಾಸ್ಪದ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 7:30 IST
Last Updated 3 ಸೆಪ್ಟೆಂಬರ್ 2011, 7:30 IST

ಮಡಿಕೇರಿ: ಸಂಸದರಾದ ಎಚ್.ವಿಶ್ವನಾಥ್ ಹಾಗೂ ಕೇಂದ್ರದ ಯುಪಿಎ ಸರ್ಕಾರ ಕೊಡಗಿಗೆ ಯಾವ ಕೊಡುಗೆಯನ್ನೂ ನೀಡಿಲ್ಲವೆಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್ ತಿರುಗೇಟು ನೀಡಿದರು.

ನಗರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆ, ರಾಜೀವ್ ಗಾಂಧಿ ವಿದ್ಯುದ್ದೀಕರಣ ಯೋಜನೆ ಸೇರಿದಂತೆ ಹಲವು ಜನಪರವಾದಂತಹ ಯೋಜನೆಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೈಗೊಂಡಿದೆ. ಇವು ಬಿಜೆಪಿ ನಾಯಕರ ಕಣ್ಣಿಗೆ ಕಾಣಿಸಲಿಲ್ಲವೇ? ಎಂದರು.

ಜಿಲ್ಲೆಯ ರಸ್ತೆಗಳಿಗೆ ಅಷ್ಟೇ ಅಲ್ಲದೇ, ಇಡೀ ರಾಜ್ಯದ ಪ್ರಮುಖ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು 1400 ಕೋಟಿ ರೂಪಾಯಿ ಅನುದಾನ ನೀಡಿದೆ. ಇದನ್ನು ಸ್ವತಃ ಅವರದ್ದೇ ಪಕ್ಷದ ಜಗದೀಶ್ ಶೆಟ್ಟರ್ ಪ್ರಶಂಸಿಸಿದ್ದರು ಎನ್ನುವುದನ್ನು ನೆನೆಪಿಸಿಕೊಳ್ಳಲಿ ಎಂದು ಹೇಳಿದರು.

`ಸಂಸದರ ಅಂಗಳದಲ್ಲಿ...~ ಕಾರ್ಯಕ್ರಮವನ್ನು ಸಂಸದರು ರಾಜಕೀಯ ರಹಿತವಾಗಿ ಏರ್ಪಡಿಸಿದ್ದರು. ಇದರಲ್ಲಿ ಜೆಡಿಎಸ್, ಕಮ್ಯುನಿಸ್ಟ್ ಪಕ್ಷದವರು ಸೇರಿದಂತೆ ಸಾರ್ವಜನಿ ಕರು ಸೇರಿದ್ದರು. ಆದರೆ, ಕೊಡಗಿನ ಹಿತರಕ್ಷಣೆ ಬಗ್ಗೆ ಭಾಷಣ ಮಾಡುವ ಯಾವ ಬಿಜೆಪಿ ನಾಯಕರೂ ಇದರಲ್ಲಿ ಭಾಗವಹಿಸಲಿಲ್ಲವೇಕೆ? ಎಂದು ಪ್ರಶ್ನಿಸಿದರು.

ಕೆಡಿಪಿ ಸಭೆಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ಕರೆಯುವಂತ ಹದ್ದು, ಹೊರತು ಸಂಸದರ ಕಾರ್ಯಕ್ರಮವಲ್ಲ. ಇಷ್ಟು ಕನಿಷ್ಠ ಜ್ಞಾನ ಬಿಜೆಪಿಯವರಿಗೆ ಇಲ್ಲವೇ? ಎಂದು ವ್ಯಂಗ್ಯವಾಡಿದರು.

ಇಎಸ್‌ಜೆಡ್‌ಗೆ ವಿರೋಧ: ಕೊಡಗು ಜಿಲ್ಲೆಯಲ್ಲಿ ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್) ಯೋಜನೆಯು ಕೇಂದ್ರ ಸರ್ಕಾರದ್ದಲ್ಲ, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ನಡೆ ಯುತ್ತಿದೆ. 2003 ಹಾಗೂ 2006ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಇಎಸ್‌ಜೆಡ್ ಬಗ್ಗೆ ಪ್ರಶ್ನಿಸಿತ್ತು. ಇದರ ಅಂಗವಾಗಿ ರಾಜ್ಯ ಸರ್ಕಾರವು 2007ರಲ್ಲಿ ಕೇಂದ್ರಕ್ಕೆ ಇಎಸ್‌ಜೆಡ್ ಪ್ರಸ್ತಾವನೆ ಕಳುಹಿಸಿತ್ತು. ಆಗ ಬಿಜೆಪಿಯವರೇ ಆದ ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಗಳಾಗಿದ್ದರು ಎಂದು ಹೇಳಿದರು. 

 ಕಾಂಗ್ರೆಸ್ ನಡಿಗೆ ಯಶಸ್ಸು: `ಕಾಂಗ್ರೆಸ್ ನಡಿಗೆ, ಜನರ ಬಳಿಗೆ~ ಕಾರ್ಯಕ್ರಮಕ್ಕೆ ಅಭೂತಪೂರ್ವ ಯಶಸ್ಸು ದೊರೆತಿದೆ. ಇದರಿಂದ ಬಿಜೆಪಿ ನಾಯಕರಲ್ಲಿ ನಡುಕ ಉಂಟಾಗಿದೆ. ಅದಕ್ಕಾಗಿ ಅವರು ಪ್ರತಿ ಸಭೆಯಲ್ಲೂ ಈ ಕಾರ್ಯಕ್ರಮದ ಬಗ್ಗೆ ಟೀಕಿಸುತ್ತಿದ್ದಾರೆ ಎಂದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಲ್ಯದ ಗಿರೀಶ್, ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.