ADVERTISEMENT

ಬಿಪಿಎಲ್‌ ಕಾರ್ಡ್‌; ಶೇ 80ರಷ್ಟು ಏರಿಕೆ

ಪಡಿತರ ಚೀಟಿ ಅದಾಲತ್‌ನಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 11:56 IST
Last Updated 4 ಮಾರ್ಚ್ 2018, 11:56 IST
ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್‌ ಮಧ್ವರಾಜ್‌ ಅರ್ಹ ಫಲಾನುಭವಿಗೆ ಬಿಪಿಎಲ್‌ ಕಾರ್ಡ್‌ ವಿತರಿಸಿದರು.
ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್‌ ಮಧ್ವರಾಜ್‌ ಅರ್ಹ ಫಲಾನುಭವಿಗೆ ಬಿಪಿಎಲ್‌ ಕಾರ್ಡ್‌ ವಿತರಿಸಿದರು.   

ಉಡುಪಿ: ‘ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಉಡುಪಿ ಕ್ಷೇತ್ರದ 18,000 ಕುಟುಂಬಳಿಗೆ ಬಿಪಿಎಲ್‌ ರೇಷನ್‌ ಕಾರ್ಡ್‌ ವಿತರಿಸಲಾಗಿದೆ’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

ಉಡುಪಿ ಕ್ಷೇತ್ರದ ನಗರಸಭಾ ಮತ್ತು ಸುತ್ತಮುತ್ತಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗಾಗಿ ಶನಿವಾರ ಆಯೋಜಿಸಿದ್ದ ಪಡಿತರ ಚೀಟಿ ಅದಾಲತ್‌ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗೆ ಬಿಪಿಎಲ್‌ ಕಾರ್ಡ್‌ ವಿತರಿಸಿ ಮಾನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ 24 ಗಂಟೆಯ ಒಳಗೆ ಹಸಿವು ಮುಕ್ತ ಕರ್ನಾಟಕದ ನಿರ್ಮಾಣಕ್ಕಾಗಿ ‘ಅನ್ನ ಭಾಗ್ಯ’ ಯೋಜನೆಯನ್ನು ಜಾರಿಗೆ ತಂದರು. ನಾನು ಶಾಸಕನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಗರ ಸಭೆ ವ್ಯಾಪ್ತಿಯಲ್ಲಿ ಶೇ20 ಹಾಗೂ ಗ್ರಾಮಪಂಚಾಯಿತಿಗಳಲ್ಲಿ ಶೇ35ರಷ್ಟು ಜನರು ಬಿಪಿಎಲ್‌ ಕಾರ್ಡ್‌ ಹೊಂದಿದ್ದರು. ಅದನ್ನು ಈಗಾಗಲೇ ಶೇ80ರಷ್ಟು ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ವಿದ್ಯುತ್ ಬಿಲ್ ಮಾನದಂಡದಲ್ಲಿ ಬಡ ಜನರಿಗೆ ಸರ್ಕಾರ ಕೊಡಮಾಡಿದ ಬಿಪಿಎಲ್ ಕಾರ್ಡ್ ಹಿಂದಕ್ಕೆ ಪಡೆಯಲಾಗಿತ್ತು. ಆದರೆ ಇಂದು ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಹೊಂದಿರುವ ಹಾಗೂ 1,000ಚದರ ಅಡಿ ವಿಸ್ತೀರ್ಣ ಮನೆ ಹೊಂದಿದ್ದವರಿಗೆ ಮಾತ್ರ ಕಾರ್ಡ್‌ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಒಂದು ಹೆಣ್ಣು ಮಗುವಿಗೆ ಭಾಗ್ಯ ಲಕ್ಷ್ಮೀ ಬಾಂಡ್ ನೀಡಲಾಗುತ್ತಿತ್ತು. ಆದರೆ ಎರಡನೇ ಹೆಣ್ಣು ಮಗು ಕೂಡ ಈ ಯೋಜನೆ ಲಾಭ ಪಡೆಯ ಬಹುದಾಗಿದೆ. ಬಿಪಿಎಲ್‌ ಕಾರ್ಡ್‌ ಇಲ್ಲದೆ ಯೋಜನೆಯಿಂದ ವಂಚಿತರಾದ ಎರಡು ವರ್ಷದ ಒಳಗಿನ ಹೆಣ್ಣು ಮಗು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ಜನರು ಪಡಿತರ ಚೀಟಿಗಾಗಿ ಅಲೆದಾಡಬಾರದು. ಹೋಬಳಿ ಮಟ್ಟದಲ್ಲಿ ಬಡವರಿಗೆ ಅನುಕೂಲವಾಗುವಂತೆ ಬಿಪಿಎಲ್ ಕುಟುಂಬದವರಿಗೆ ಪಡಿತರ ಚೀಟಿ ವಿತರಿಸುವ ಪಡಿತರ ಚೀಟಿ ಆದಾಲತ್‌ ನಡೆಸಲಾಗುತ್ತಿದೆ. ಕಲ್ಯಾಣಪುರಣದಲ್ಲಿ ಇದೇ 8 ಹಾಗೂ ಕೊಕ್ಕಣೆಯಲ್ಲಿ 10ರಂದು ಕೊನೆಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
**
ಹೊಸ ಯೋಜನೆ

ಬಿಪಿಎಲ್‌ ಕಾರ್ಡ್‌ದಾರರಿಗೆ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಹೃದಯ ಸಂಬಂಧಿಸಿದ ಕಾಯಿಲೆ, ಮೂತ್ರಪಿಂಡ ಸಮಸ್ಯೆಗಳು ಇದ್ದಲ್ಲಿ ಅವರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಎಪಿಎಲ್‌ ಕಾರ್ಡ್‌ದಾರರಿಗೆ ಅನ್ವಯವಾಗುವ ಈ ಯೋಜನೆಯಡಿ ಫಲಾನುಭವಿಗಳು ಚಿಕಿತ್ಸಾ ವೆಚ್ಚದ ಶೇ.30ರಷ್ಟನ್ನು ಭರಿಸಬೇಕು. ಈ ಮೊತ್ತವನ್ನು ವಿಮೆ ಮೂಲಕ ಭರಿಸುವ ಬಗ್ಗೆಯೂ ಸರ್ಕಾರ ನಿರ್ಧರಿಸಿರುವುದರಿಂದ ಚಿಕಿತ್ಸೆ ಸಂದರ್ಭದಲ್ಲಿ ರೋಗಿ ಅಥವಾ ಆತನ ಕುಟುಂಬದವರು ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಬರುವುದಿಲ್ಲ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.