ADVERTISEMENT

ಭಯೋತ್ಪಾದನೆ ವಿರುದ್ಧ ಹೋರಾಟ ಅಗತ್ಯ: ಸೋಮಯ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 8:30 IST
Last Updated 23 ಸೆಪ್ಟೆಂಬರ್ 2011, 8:30 IST

ಗೋಣಿಕೊಪ್ಪಲು: ಭಯೋತ್ಪಾದಕತೆ 21 ನೇ ಶತಮಾನದ ಬಹುದೊಡ್ಡ ಪಿಡುಗಾಗಿದೆ. ಇದರ ನಿಯಂತ್ರಣಕ್ಕೆ ಇಡೀ ವಿಶ್ವವೆ ಒಂದಾಗಿ ನಿಲ್ಲಬೇಕು ಎಂದು ಬೆಂಗಳೂರು ಸಂತ ಜೋಸೆಫ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪರದಂಡ ಇ. ಸೋಮಯ್ಯ ಹೇಳಿದರು.

ಇಲ್ಲಿನ ಕಾವೇರಿ ಕಾಲೇಜಿನ ಮಿಲಿಟರಿ ಸೈನ್ಸ್ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ಭಯೋತ್ಪಾದಕತೆ ಕುರಿತ ವಿಚಾರ ಸಂಕಿರಣದಲ್ಲಿ ಭಯೋತ್ಪಾದಕತೆಯ ಇತಿಹಾಸ ಕುರಿತು ಪ್ರಬಂಧ ಮಂಡಿಸಿದ ಅವರು, ಭಯೋತ್ಪಾದಕತೆ ಆಧುನಿಕ ಜಗತ್ತಿಗೆ ಅಂಟಿರುವ ಶಾಪವಾಗಿದೆ ಎಂದರು. 

 `ವಿಶ್ವದ ಭಯೋತ್ಪಾದಕತೆ ಮತ್ತು ಸಮಕಾಲೀನ ಸವಾಲು~ ಕುರಿತು  ವಿಷಯ ಮಂಡಿಸಿದ ಎಂ.ಜೆ. ವಿನೋದ್, ಭಯೋತ್ಪಾದಕತೆ ಭಾರತೀಯ ಸಮಾಜವನ್ನೆ ಅಲುಗಾಡಿಸುತ್ತಿದೆ. ಅಪಘಾನಿಸ್ತಾನ ಮತ್ತು ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ದೇಶದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಲು ಸಂಚು ರೂಪಿಸುತ್ತಾ ಬರುತ್ತಿವೆ. ಆದರೆ, ದೇಶದ ಆಡಳಿತ ವ್ಯವಸ್ಥೆ ಸುಭದ್ರವಾಗಿರುವವರೆಗೂ ಈ ಸಂಚು ಫಲಿಸದು ಎಂದು ಅಭಿಪ್ರಾಯಪಟ್ಟರು.

ವಿಶ್ವಶಾಂತಿಗೆ ಭಯೋತ್ಪಾದಕತೆಯ ಧಕ್ಕೆ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ ನಿವೃತ್ತ ಬ್ರಿಗೇಡಿಯರ್ ಕೆ.ಎ.ಮುತ್ತಣ್ಣ, ಭಯೋತ್ಪಾದಕರು ಯಾವತ್ತೂ ಆಡಳಿತ ವ್ಯವಸ್ಥೆಯ ವಿರುದ್ಧವಾಗಿಯೇ ಇರುತ್ತಾರೆ. ಯುವಜನತೆ ಇಂತಹ ವ್ಯವಸ್ಥೆಯ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಪತ್ರಕರ್ತ ಆರ್.ಪ್ರಸನ್ನ ಭಯೋತ್ಪಾದಕತೆ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡಿದರು. ಮಿಲಿಟರಿ ಸೈನ್ಸ್ ವಿಭಾಗದ ಮುಖ್ಯಸ್ಥ ದೇವಯ್ಯ, ಪ್ರಾಂಶುಪಾಲ ಪ್ರೊ. ಬಿದ್ದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.