ಮಡಿಕೇರಿ: ‘ಮಹಿಳೆಯರ ಮೇಲೆ ಇತ್ತೀಚೆಗೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅದಕ್ಕೆ ಕಡಿವಾಣ ಹಾಕಬೇಕು’ ಎಂದು ನಿವೃತ್ತ ಶಿಕ್ಷಕಿ ಬೋಜಮ್ಮ ಆಗ್ರಹಿಸಿದರು.ಕೊಡವ ಸಮಾಜದಲ್ಲಿ ಶುಕ್ರವಾರ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.‘ಮಹಾತ್ಮ ಗಾಂಧಿ ರಾಮರಾಜ್ಯದ ಕನಸು ಕಂಡಿದ್ದರು. ಆದರೆ, ಇಂದಿಗೂ ಹೆಣ್ಣು ಮಕ್ಕಳ ಮೇಲೆ ಶೋಷಣೆಗಳು ನಿಂತಿಲ್ಲ’ ಎಂದು ವಿಷಾದಿಸಿದರು.‘ಯುವ ಜನರಿಗೆ ನಮ್ಮ ಸಂಸ್ಕೃತಿ, ಆಚಾರ– ವಿಚಾರ ತಿಳಿಸಬೇಕು. ಉತ್ತಮ ಶಿಕ್ಷಣ ಕೊಡಬೇಕು. ಮಹಿಳೆಯರೂ ಸಹ ಮೌಲ್ಯಾಧಾರಿತ ಜೀವನ ನಡೆಸುವ ಮೂಲಕ ಮಾದರಿ ಆಗಬೇಕು’ ಎಂದು ಕರೆ ನೀಡಿದರು.
ಶಿಶು ಅಭಿವೃದ್ಧಿ ಯೋಜನೆ ಸಹಾಯಕ ಅಧಿಕಾರಿ ಸವಿತಾ ಕೀರ್ತಿ ಮಾತನಾಡಿ, ಸರ್ಕಾರವು ಮಹಿಳೆಯರಿಗೆ ಸಾಕಷ್ಟು ಯೋಜನೆ ಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಾಕಷ್ಟು ಪ್ರತಿಭೆಯಿದ್ದರೂ ನಮ್ಮ ಜನಾಂಗದ ಮಕ್ಕಳು ಪಾಲ್ಗೊಳ್ಳದಿರುವುದು ಬೇಸರದ ವಿಚಾರ’ ಎಂದರು.ನಂತರ, ನಡೆದ ಸ್ಪರ್ಧೆಗಳಿಗೆ ಕೋಟೆರ ಮೀರಾ ಪೂಣಚ್ಚ ಚಾಲನೆ ನೀಡಿದರು. ತೀರ್ಪುಗಾರರಾಗಿ ಚೌರೀರ ಸುಜು, ಪಳಂಗಂಡ ಕಮಲಾ, ಕಲಿಯಂಡ ಸರಸ್ವತಿ, ಐಮುಡಿಯಂಡ ರಾಣಿ ಮಾಚಯ್ಯ, ಮಾದೇಟಿರ ಬೆಳ್ಯಪ್ಪ ಕಾರ್ಯ ನಿರ್ವಹಿಸಿದರು.ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಯಿತು.
ಏಕಪಾತ್ರಾಭಿನಯ, ಹಾಸ್ಯ ನಾಟಕ, ಕೋಲಾಟ, ಕೊಡವ ನೃತ್ಯಗಳನ್ನು ಪ್ರೇಕ್ಷಕರನ್ನು ರಂಜಿಸಿದವು. ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಸ್ಥಾಪಕ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ, ಕಾರ್ಯದರ್ಶಿ ಯಮುನಾ ಅಯ್ಯಪ್ಪ, ಖಜಾಂಜಿ ಉಳ್ಳಿಯಡ ಸಚಿತಾ ಗಂಗಮ್ಮ, ಕೊಡವ ಸಮಾಜದ ಕಾರ್ಯದರ್ಶಿ ರಮೇಶ್ ಹಾಜರಿದ್ದರು.
**
ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ತೋರುವ ಪ್ರತಿಭೆ ಹೊಂದಿದ್ದಾರೆ. ಹೆಣ್ಣು ಮಕ್ಕಳು ಸಂಸಾರದ ಕಣ್ಣಾಗಿ ಜೀವನ ನಡೆಸಿದರೆ ಸಂಸಾರ ಸುಂದರವಾಗಿರಲಿದೆ – ಬೋಜಮ್ಮ ಚಂಗಪ್ಪ, ನಿವೃತ್ತ ಶಿಕ್ಷಕಿ.
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.