ADVERTISEMENT

ರೆಸಾರ್ಟ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:20 IST
Last Updated 1 ಜೂನ್ 2011, 10:20 IST

ನಾಪೋಕ್ಲು: ಪೇರೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರೆಸಾರ್ಟ್ ವಿರುದ್ಧ ಸ್ಥಳೀಯ ಗ್ರಾಮ ಸ್ಥರು ವಿರೋಧ ವ್ಯಕ್ತಪಡಿಸಿ ಮಂಗಳ ವಾರ ಪ್ರತಿಭಟನೆ ಮಾಡಿದರು.

ಹೊರರಾಜ್ಯದವರು ಪೇರೂರಿನಲ್ಲಿ ನೂರಾರು ಏಕರೆ ಜಮೀನು ಖರೀದಿಸಿ ರೆಸಾರ್ಟ್ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಇಲ್ಲಿನ ಇಗ್ಗುತ್ತಪ್ಪ ದೇವಾಲಯದಿಂದ ಮಲ್ಮ ಬೆಟ್ಟಕ್ಕೆ ಹೋಗುವ ಕಾಲುದಾರಿ ಬಳಸಿಕೊಂಡು ಲಕ್ಷಾಂತರ ರೂಪಾಯಿಗಳ ಮರಗಳ ಹನನ ಮಾಡಿದ್ದಾರೆ. ಒಂದು ಏಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಯೋಜನೆ ರೂಪಿಸಿ ಜಲಸಂಪನ್ಮೂಲ ಹಾಳುಗೆಡವು ತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಕ್ಷಿತಾರಣ್ಯ ಹಾಗೂ ದೇವರ ಕಾಡನ್ನು ರಸ್ತೆ ನಿರ್ಮಾಣಕ್ಕೆ ಬಳಸಿ ಕೊಂಡಿರುವ ರೆಸಾರ್ಟ್ ಮಾಲೀಕರು ಗ್ರಾಮಸ್ಥರ ವಿರೋಧದಿಂದ ಕೆರೆ ನಿರ್ಮಾಣ ಸದ್ಯಕ್ಕೆ ಸ್ಥಗಿತಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಕಾವೇರಿ ಸೇನೆ ಮುಖ್ಯಸ್ಥ ರವಿಚೆಂಗಪ್ಪ, ರೆಸಾರ್ಟ್ ನಿರ್ಮಾಣಕ್ಕೆ ಉದ್ದೇಶಿತ ಸ್ಥಳವನ್ನು ಪರಿಶೀಲನೆ ನಡೆಸಿ ಮಾತನಾಡಿದರು.

ಕಾವೇರಿ ಸೇನೆ ಪರಿಸರ ಸಂರಕ್ಷಣೆ ಬಗ್ಗೆ ನಿರಂತರವಾಗಿ ಹೋರಾಡುತ್ತಿದೆ. ಪೇರೂರಿನ ಪರಿಸರದಲ್ಲಿ ಲಕ್ಷಾಂತರ ರೂಪಾಯಿ ಮರ ಹನನವಾದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಕೊಡಗಿನಲ್ಲಿ ನೆಲ-ಜಲ ಪರಿಸರ ಕಾಪಾಡುವ ನಿಟ್ಟಿನಲ್ಲಿ ಹೋರಾಡುವವ ರನ್ನು ಕೊಡಗು ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ.

ರೆಸಾರ್ಟ್ ನಿರ್ಮಾ ಣದ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ ಮರಗಳ ಹನನವಾಗುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಕಾವೇರಿ ಸೇನೆಯು ಜೂನ್ 3ರಂದು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು.

ಜಿ.ಪಂ ಮಾಜಿ ಸದಸ್ಯ ಮನು ಮುತ್ತಪ್ಪ ಮಾತನಾಡಿ, ರೆಸಾರ್ಟ್ ನಿರ್ಮಾಣದ ಹಿನ್ನೆಲೆಯಲ್ಲಿ ಪರಿಸರ ಹಾಳುಗೆಡವಲಾಗುತ್ತಿದೆ. ಅಪಾರ ಪ್ರಮಾಣದ ಅರಣ್ಯನಾಶ ಕಂಡು ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶಿಫಾ ರಸ್ಸು ಮಾಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಬದ್ದಂಜೆಟ್ಟೀರ ನಾಣಯ್ಯ, ಮಾಳೆಯಂಡ ಅಯ್ಯಪ್ಪ, ಅಪ್ಪುಮಣಿಯಂಡ ನವೀನ್ ಉತ್ತಯ್ಯ, ಅಪ್ಪುಮಣಿಯಂಡ ಕಾರ್ಯಪ್ಪ, ಕೋಟೇರ ಪಳಂಗಪ್ಪ, ಸಿ.ಎಂ. ಅಪ್ಪಚ್ಚು, ಚೀಯಕ ಪೂವಂಡ ಉಮೇಶ್, ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.