ADVERTISEMENT

‘ರೈಲು ಮಾರ್ಗ ಕೈಬಿಡಲು ನಿರ್ಣಯ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 9:15 IST
Last Updated 20 ಡಿಸೆಂಬರ್ 2017, 9:15 IST

ಪೊನ್ನಂಪೇಟೆಯನ್ನು ಕೇಂದ್ರವಾಗಿಸಿಕೊಂಡು ನೂತನ ತಾಲ್ಲೂಕನ್ನು ರಚನೆಮಾಡಬೇಕು. ಕೇರಳಕ್ಕೆ ಕೊಡಗಿನ ಮೂಲಕ ಹಾದು ಹೋಗಲಿರುವ ರೈಲ್ವೆ ಮಾರ್ಗ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ತಿತಿಮತಿ ಗ್ರಾಮ ಸಭೆಯಲ್ಲಿ ಸೋಮವಾರ ಕೈಗೊಳ್ಳಲಾಯಿತು. ಅಧ್ಯಕ್ಷ ಎಚ್.ಇ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸದಸ್ಯರ ಮತ್ತು ಗ್ರಾಮಸ್ಥರ ಒತ್ತಾಯದ ಮೇರೆಗೆ ತೀರ್ಮಾನ ಕೈಗೊಳ್ಳಲಾಯಿತು.

ಕಾಫಿ ಬೆಳೆಗಾರ ಚೆಪ್ಪುಡೀರ ಶರಿ ಸುಬ್ಬಯ್ಯ ಮಾತನಾಡಿ, ಕೇರಳ, ಕೊಡಗು ರೈಲ್ವೆ ಮಾರ್ಗ ನಿರ್ಮಾಣದಿಂದ ಜಿಲ್ಲೆಗೆ ಸಮಸ್ಯೆ ಉಂಟಾಗುತ್ತದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಸಾವಿರಾರೂ ಮರಗಳು ಹನನವಾಗಿ ಕೊಡಗಿನ ಕೃಷಿ ಮೇಲೆ ದುಷ್ಪರಿಣಾಮ ಬೀರಲಿದೆ. ರೈತರು ತಮ್ಮ ಜಾಗಗಳನ್ನು ಕಳೆದುಕೊಳ್ಳುತ್ತಾರೆ. ಈ ಬಗ್ಗೆ ನಾಗರಿಕರು ಜಾಗೃತಗೊಂಡು ರೈಲ್ವೆ ಮಾರ್ಗಕ್ಕೆ ಪ್ರಥಮ ಹಂತದಲ್ಲೇ ವಿರೋಧ ವ್ಯಕ್ತಪಡಿಸಬೇಕು ಎಂದು ಹೇಳಿದರು.

ತಿತಿಮತಿ ಭಾಗದಲ್ಲಿ ಅತೀ ಹೆಚ್ಚು ಕಾಡಾನೆ ಸಮಸ್ಯೆ ಇದ್ದು ಗ್ರಾಮಸಭೆಗಳಿಗೆ ವನ್ಯಜೀವಿ ಅಧಿಕಾರಿಗಳು ನಿರಂತರ ಗೈರಾಗುವ ಮೂಲಕ ಜನರಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕಾಡಾನೆ ಸಮಸ್ಯೆಗಳಿಂದ ಇಲ್ಲಿನ ಕೃಷಿಕರಿಗೆ ಸಮಸ್ಯೆ ಉಂಟಾಗಿದೆ ಈ ಬಗ್ಗೆ ಮೇಲಾಧಿಕಾರಿಗಳಿಗೆ ಪಂಚಾಯಿತಿ ವತಿಯಿಂದ ಲಿಖಿತ ದೂರು ನೀಡಿ ಮುಂದಿನ ಗ್ರಾಮ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಹೇಳಬೇಕು ಎಂದರು.

ADVERTISEMENT

ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ, ತಿತಿಮತಿ ಗ್ರಾಮದಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ನಗರದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ಪಂಚಾಯಿತಿ ಮುಂದಾಗಬೇಕು. ಪಂಚಾಯಿತಿ ವತಿಯಿಂದ ವರ್ಷಕ್ಕೆ ಒಮ್ಮೆ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಸಾರ್ವಜನಿಕರ ಉತ್ತಮ ಆರೋಗ್ಯಕ್ಕೆ ಪಂಚಾಯಿತಿ ಆದ್ಯತೆ ನೀಡಬೇಕು ಎಂದರು.

ಹಿಮಾಲಯ ಪರ್ವತಾರೋಹಣ ಮಾಡಿದ ತಿತಿಮತಿ ಗ್ರಾಮದ ಸಂಚೀತ್, ಸನತ್, ಪ್ರೀತಂ, ಹಿರಿಯ ಸಮಾಜ ಸೇವಕ ಶರಣಪಿಳೈ, ವಿದ್ಯುತ್ ಇಲಾಖೆ ಲೈನ್‌ಮೆನ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ನೋಡೆಲ್ ಅಧಿಕಾರಿ ಚಂದ್ರ ಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಆಶಾ ಜೇಮ್ಸ್, ಗಾಮ ಪಂಚಾಯಿತಿ ಸದಸ್ಯರಾದ ಚುಬ್ರು, ಅನೂಪ್, ಶಾಂತಮ್ಮ, ಸಿದ್ದರಾಜ್, ಪೊನ್ನು, ರಾಣಿ ಸುಬ್ಬಯ್ಯ, ಶ್ರೀನಿವಾಸ್, ವಿಜಯ, ರಜನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.