ಶನಿವಾರಸಂತೆ: ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ಸಂಜೆ ಗುಡುಗು ಸಿಡಿಲಿನ ಮಳೆ ಸುರಿಯಿತು.
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನ 3-30 ಗಂಟೆಗೆ ಇದ್ದಕ್ಕಿದ್ದಂತೆ ಗುಡುಗು-ಸಿಡಿಲಿನ ಆರ್ಭಟಕ್ಕೆ ಜನ ಬೆಚ್ಚಿಬಿದ್ದರು. ತಕ್ಷಣ ಮಳೆ ಜೋರಾಗಿ ಸುರಿಯತೊಡಗಿತು.
ಸಂಜೆ 4.30 ರವರೆಗೆ ಸುರಿದ ಮಳೆಗೆ ಸುಡುತ್ತಿದ್ದ ಧರೆ ತಂಪಾಯಿತು. ಅರ್ಧ ಇಂಚಿಗೂ ಅಧಿಕ ಮಳೆಯಾಯಿತು.
ಮಳೆಗಾಗಿ ಹಂಬಲಿಸುತ್ತಿದ್ದ ಕೃಷಿಕರಿಗೆ ಮಳೆ ಖುಷಿ ನೀಡಿತು. ಕೆಲವು ಗ್ರಾಮಗಳಲ್ಲಿ ಬೆಳೆಯಲಾಗಿರುವ ಹಸಿ ಮೆಣಸಿನಕಾಯಿ ಬೆಳೆಗೆ ಮಳೆ ಅನುಕೂಲವಾಯಿತು. ಮೂರು ನಾಲ್ಕುದಿನ ಗಿಡಗಳಿಗೆ ನೀರು ಹಾಕುವ ಶ್ರಮ ತಪ್ಪಿತು. ಆದರೆ ಈ ವರ್ಷ ಹಸಿ ಮೆಣಸಿನಕಾಯಿ ಬೆಳೆದ ರೈತರ ಸಂಖ್ಯೆಯೇ ಕಡಿಮೆಯಾಗಿದೆ.
`ಬಿಸಿಲ ಧಗೆಯಿಂದ ಸುಡುತ್ತಿರುವ ಭೂಮಿಗೆ ಈ ಮಳೆ ಸಾಲದು. ಕೆಲ ತೋಟಗಳಲ್ಲಿ ಮಾತ್ರ ಕಾಫಿ ಹೂ ಅರಳಿದೆ. ಒಂದೆರೆಡು ದಿನ ಬಿಡದೆ ಮಳೆಯಾದರೆ ಅಥವಾ ವಾರದ ನಂತರ ಉತ್ತಮ ಮಳೆಯಾದರೆ ಕಾಫಿ ಬೆಳೆ ಉಳಿದೀತು. ಮಳೆಯಾಗುತ್ತಿರುವ ಲಕ್ಷಣ ಗಮನಿಸಿದರೆ ಈ ಬಾರಿ ಕಾಫಿ ಬೆಳೆಗೆ ಹೊಡೆತ ಬಿದ್ದಂತೆ ಕಾಣುತ್ತದೆ~ ಎಂದು ಕೂಜಗೇರಿ ಗ್ರಾಮದ ಬೆಳೆಗಾರ ಕೆ.ಟಿ.ಹರೀಶ್ ಅಭಿಪ್ರಾಯಪಟ್ಟರು.
ಕಳೆದ ವರ್ಷ ಈ ವೇಳೆಗೆ ಉತ್ತಮ ಮಳೆಯಾಗಿತ್ತು. ಕಾಫಿ ಫಸಲು ಚೆನ್ನಾಗಿತ್ತು. ಬೆಳೆಗಾರರು ಉತ್ತಮ ಬೆಲೆಯನ್ನು ಪಡೆದಿದ್ದರು. ಆದರೆ, ಈ ವರ್ಷ ಹೂ ಅರಳುವ ಸಮಯದಲ್ಲೆ ವರುಣದೇವ ಮುನಿಸಿಕೊಂಡಂತೆ ತೋರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.