ADVERTISEMENT

ಶೌಚಾಲಯ ದುರಸ್ತಿಗೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 6:15 IST
Last Updated 3 ಅಕ್ಟೋಬರ್ 2012, 6:15 IST

ನಾಪೋಕ್ಲು: ಸಾರ್ವಜನಿಕ ಶೌಚಾಲಯವನ್ನು ಶೀಘ್ರದಲ್ಲಿ ದುರಸ್ತಿಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಒದಗಿಸಬೇಕು ಎಂದು ಕಿಗ್ಗಾಲು ಗ್ರಾಮದ ನಿವಾಸಿ ಸಾತ್ವಿಕ್ ಒತ್ತಾಯಿಸಿದರು.

ಸಮೀಪದ ಕಾಂತೂರು ಮೂರ್ನಾಡು ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಈಚೆಗೆ ನಡೆದ ಜಮಾಬಂದಿ ಸಭೆಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಕೇಶವ ಸಾರ್ವಜನಿಕ ಶೌಚಾಲಯದ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಿದ್ದು ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಮೂರ್ನಾಡು-ಮಡಿಕೇರಿ ರಸ್ತೆಯ ಸರ್ವಿಸ್ ಸ್ಟೇಶನ್ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ಶಾಲಾ ಮಕ್ಕಳಿಗೆ, ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ. ಮೋರಿ ನಿರ್ಮಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ಕಾಮಗಾರಿ ನಡೆದಿಲ್ಲ ಎಂದು ಮೂರ್ನಾಡು ನಿವಾಸಿ ಉಸ್ಮಾನ್ ಆರೋಪಿಸಿದರು.

ಜಮಾಬಂದಿ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಹಲವು ಸದಸ್ಯರು ಗೈರುಹಾಜರಾಗುತ್ತಿದ್ದಾರೆ. ಪ್ರತಿಯೊಬ್ಬ ಸದಸ್ಯರೂ ತಪ್ಪದೇ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಳಂಗಂಡ ಕೆ. ಅಪ್ಪಣ್ಣ ಒತ್ತಾಯಿಸಿದರು. ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರಸ್ಥರ ಕೋರಿಕೆ ಮೇರೆಗೆ ಕೊಠಡಿ ನೀಡಲು ಮುಂಗಡ ಹಣ ಪಡೆದುಕೊಂಡಿರುವುದು ಸರಿಯಲ್ಲ.

ಕಟ್ಟಡ ನಿರ್ಮಾಣಗೊಂಡ ಬಳಿಕ ಮಳಿಗೆಗಳನ್ನು ಹರಾಜು ಮುಖಾಂತರ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ನೋಡಲ್ ಅಧಿಕಾರಿಯಾಗಿ ತಾಲೂಕು ಪಂಚಾಯಿತಿ ಲೆಕ್ಕಾಧೀಕ್ಷಕ ಎಲ್.ಆರ್. ಪಾಂಡುರಂಗಯ್ಯ ತಾಲ್ಲೂಕು ಪಂಚಾಯತಿ ಸದಸ್ಯ ವಿ.ವಿ. ಹರೀಶ್‌ಕುಮಾರ್. ಪಿಡಿಓ ಶೋಭಾರಾಣಿ, ಜಿಲ್ಲಾ ಪಂಚಾಯತಿ ಎಂಜಿನಿಯರ್ ಚೆನ್ನಕೇಶವ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.