ADVERTISEMENT

ಸಂಶೋಧನೆಯಿಂದ ಹೊಸತನ ಸಾಧ್ಯ: ಪೊನ್ನಪ್ಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 8:05 IST
Last Updated 20 ಮಾರ್ಚ್ 2012, 8:05 IST
ಸಂಶೋಧನೆಯಿಂದ ಹೊಸತನ ಸಾಧ್ಯ: ಪೊನ್ನಪ್ಪ
ಸಂಶೋಧನೆಯಿಂದ ಹೊಸತನ ಸಾಧ್ಯ: ಪೊನ್ನಪ್ಪ   

ವೀರಾಜಪೇಟೆ: ಸಂಶೋಧನೆ ಎನ್ನುವುದು ಪ್ರತಿ ಕ್ಷೇತ್ರಕ್ಕೂ ಬಹುಮುಖ್ಯ. ಸಂಶೋಧನೆಯಿಂದ ಆಯಾ ಕ್ಷೇತ್ರಗಳಲ್ಲಿ ಹೊಸತನ ಕಂಡುಕೊಳ್ಳಲು ಸಾಧ್ಯ. ಕ್ರೀಡಾ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ ಎಂದು ರಾಜ್ಯ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ  ಹೇಳಿದರು.

ವಿರಾಜಪೇಟೆಯ ಕಾವೇರಿ ಕಾಲೇಜು, ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ಇಲಾಖೆಯ ಸಂಶೋಧನ ವಿಭಾಗ, ದೈಹಿಕ ಶಿಕ್ಷಕರ ಒಕ್ಕೂಟದ ಸಂಯುಕ್ತ ಆಶ್ರದಲ್ಲಿ ವೀರಾಜಪೇಟೆಯ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕ್ರೀಡೆ ಮತ್ತು ಯೋಜನೆಗೆ ಸಂಬಂಧಿಸಿದ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ದೇಶದ ಕ್ರೀಡಾರಂಗದಲ್ಲಿ ಅಗತ್ಯಕ್ಕಿಂತ್ತಲು ಹೆಚ್ಚಾಗಿ ವಿದೇಶಿಯರನ್ನು ಅವಲಂಬಿಸುತ್ತಿರುವುದು ಉತ್ತಮವಾದ ಬೆಳವಣಿಗೆಯಲ್ಲ. ನಮ್ಮ ದೇಶೀಯರ ದೇಹ ಮತ್ತು ಪ್ರಕೃತಿಗೆ ಹೊಂದುವ ರೀತಿಯ ತರಬೇತಿ ಮತ್ತು ಶಿಕ್ಷಣವನ್ನು ನಾವೇ ನೀಡಬೇಕಾಗಿದೆ. ತರಬೇತಿದಾರರಿಗೆ ಗುಣಮಟ್ಟದ ಶಿಕ್ಷಣ ಮುಖ್ಯ. ಆದರೆ ದೇಶದಲ್ಲಿ ದೈಹಿಕ ಶಿಕ್ಷಣ ಕೇತ್ರ, ಕ್ರೀಡಾ ಕ್ಷೇತ್ರದಲ್ಲಿ ಅಧಿಕವಾಗಿ ಸಂಶೋಧನೆ ನಡೆದಿದ್ದು ಬಹಳ ವಿರಳ ಎಂದರು.

ನಾವು ಪ್ರತಿಭಾವಂತರನ್ನು ಗುರುತಿಸಲು ವಿಫಲರಾಗುತ್ತಿದ್ದು, ಎಂದಿನವರೆಗೆ ಸಂಶೋಧನೆಯ ಅಭಿಯಾನ ನಡೆಯುವುದಿಲ್ಲವೋ ಅಲ್ಲಿಯವರೆಗೆ ಕ್ರೀಡಾ ಕ್ಷೇತ್ರಕ್ಕೆ ಅರ್ಹ ಸ್ಥಾನ ಲಭಿಸಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಎಂ.ಎ. ಪೊನ್ನಪ್ಪ ಅವರಿಗೆ ಕೊಡವರ ಪೇಟ ಮತ್ತು ಒಡಿ ಕತ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕಾವೇರಿ ವಿದ್ಯಾ ಸಂಸ್ಥೆಯ ನಿರ್ದೇಶಿಕಿ ಸ್ವಾತಿ ಬೋಪಣ್ಣ, ಕಾಲೇಜಿನ ಪ್ರಾಂಶುಪಾಲ ಡಾ.ಎಸ್ ಪೂವಮ್ಮ, ಪ್ರೊ.ಪದ್ಮನಾಭ, ಉಪನ್ಯಾಸಕಿ ಎಂ.ಎಂ. ದೇಚಮ್ಮ ಮಾತನಾಡಿದರು.

ವಿಚಾರ ಸಂಕಿರಣದಲ್ಲಿ ಕೇರಳ, ಆಂಧ್ರಪ್ರದೇಶ,  ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ಸೇರಿದಂತೆ ಒಟ್ಟು 126 ಪ್ರತಿನಿಧಿಗಳು ಭಾಗವಹಿಸಿ 70 ಪ್ರಬಂಧ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.