ADVERTISEMENT

`ಸಂಸ್ಕೃತಿ ಉಳಿವಿಗೆ ಗ್ರಾಮೀಣ ಕ್ರೀಡಾಕೂಟ ಸಹಕಾರಿ'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:59 IST
Last Updated 4 ಸೆಪ್ಟೆಂಬರ್ 2013, 5:59 IST

ನಾಪೋಕ್ಲು: ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ನಿರಂತರವಾಗಿ ಬೆಳೆದು ಪರಸ್ಪರ ಅರಿವು ಮೂಡಲು ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಮೂರ್ನಾಡಿನ ನಾಡುಮಂದ್‌ನಲ್ಲಿ ಮೂರ್ನಾಡು ಸಹಕಾರ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ 89ನೇ ವಾರ್ಷಿಕ ಕೈಲುಮುಹೂರ್ತ ಹಬ್ಬದ ಗ್ರಾಮೀಣ ಆಟೋಟ ಸ್ಪರ್ಧೆಯ  ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯು ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿದ್ದು, ಜಿಲ್ಲೆಯ ಅನೇಕ ಕ್ರೀಡಾಪಟುಗಳು ಕ್ರೀಡಾಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.  ಕೈಲು ಮುಹೂರ್ತದಂತಹ  ಹಬ್ಬಗಳ ಆಚರಣೆಯಿಂದ ಪ್ರತಿಯೊಬ್ಬರೂ ಕಲೆತು ಬೆರೆಯುವಲ್ಲಿ ಸಹಕಾರಿಯಾಗಿದೆ ಎಂದರು.

ನಾಡ್ ಮಂದ್ ಮತ್ತು ಶಾಲಾ ಮೈದಾನದಲ್ಲಿ ನಡೆಸಲಾದ ಆಟೋಟ ಸ್ಪರ್ಧೆಗಳಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಪ್ರಾಥಮಿಕ, ಪ್ರೌಢಶಾಲೆ, ಕಿರಿಯ ಬಾಲಕರಿಗೆ, ಬಾಲಕಿಯರಿಗೆ, ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ವಿವಿಧ ರೀತಿಯ ಓಟದ ಸ್ಪರ್ಧೆಗಳು ನಡೆಯಿತು. ಬೇತ್ರಿಯಿಂದ ಮೂರ್ನಾಡಿಗೆ ಸೈಕಲ್ ರೇಸ್, ಮ್ಯೂಸಿಕ್ ಛೇರ್, ನಿಂಬೆಹಣ್ಣು ಚಮಚ ಓಟ, ಕಾಲುಕಟ್ಟಿ ಓಟ, ವಯಸ್ಕರ ಓಟ, ಭಾರದ ಕಲ್ಲು ಎಸೆತ, ಹಗ್ಗ ಜಗ್ಗಾಟ ಪಂದ್ಯಾಟಗಳಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಸ್ಪರ್ಧೆಗಳಲ್ಲಿ ಪಾಲ್ಗೊಂಡು  ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮೂಡೇರ ಹರೀಶ್ ಕಾಳಯ್ಯ ಮತ್ತು ತಿರ್ಕಚೇರಿರ ತಮ್ಮಯ್ಯ ಆಟೋಟಗಳ ವೀಕ್ಷಕ ವಿವರಣೆ ನೀಡಿದರು.

ಸಹಕಾರ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಾಡಿಚೆಟ್ಟಿರ ನಾಣಯ್ಯ, ಕಾರ್ಯದರ್ಶಿ ಕೋಟೇರ ಕಾರ್ಯಪ್ಪ, ನಿರ್ದೇಶಕರಾದ ಪಳಂಗಂಡ ಎಂ. ಲವಕುಮಾರ್, ಚೇನಂಡ ಪಿ. ಅಯ್ಯಣ್ಣ, ಕಂಬೀರಂಡ ಕೆ. ಮುತ್ತಪ್ಪ, ಕೆ.ಪಿ. ಭರತ್ ನಾಯ್ಕ, ಪುದಿಯೊಕ್ಕಡ ಎನ್. ದೇವಯ್ಯ ಮತ್ತು ಅವರೆಮಾದಂಡ ಜಿ. ಕುಶಾಲಪ್ಪ, ಆರ್‌ಎಂಸಿ ಅಧ್ಯಕ್ಷ ಬೆಲ್ಲು ಸೋಮಯ್ಯ, ಕಾರ್ಯದರ್ಶಿ ಕೋಟೇರ ಕಾರ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.