ADVERTISEMENT

ಸಮನ್ವಯ ಸಮಿತಿ ನಿರ್ಧಾರ ಅನುಷ್ಠಾನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 6:15 IST
Last Updated 11 ಜೂನ್ 2011, 6:15 IST

ಕುಶಾಲನಗರ: ಜಿಲ್ಲೆಯಲ್ಲಿ ಶೀಘ್ರ ಗತಿಯಲ್ಲಿ ಬೆಳೆಯುತ್ತಿರುವ ಕುಶಾಲ ನಗರ ಪಟ್ಟಣದ ಅಭಿವೃದ್ಧಿ ಬಗ್ಗೆ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಹೊಂದಿರುವ ನಿರ್ಲಕ್ಷ್ಯ ಧೋರಣೆ ವಿರುದ್ಧ ಶುಕ್ರವಾರ ನೇರ ಆರೋಪ ಮಾಡಿದ ನಾಗರಿಕರು ಪರಸ್ಪರ ಸಮನ್ವ ಯತೆಯಿಂದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಬೇಕು ಎಂದು ಒತ್ತಾಯಿಸಿದರು.

ಕುಶಲೋದಯ ಪತ್ರಿಕಾ ಟ್ರಸ್ಟ್ ವತಿಯಿಂದ ಪಟ್ಟಣದ ಅಭಿವೃದ್ಧಿ ಕುರಿತು ಶುಕ್ರವಾರ ಕನ್ನಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಅಭಿವೃದ್ಧಿ ಯೋಜನೆಗಳ ಸಫಲತೆ -ವಿಫಲತೆ ಕುರಿತು ಪಂಚಾಯ್ತಿ ಅಧ್ಯಕ್ಷರು, ಸದಸ್ಯರೊಂದಿಗೆ ಏರ್ಪಡಿಸ ಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗುವ ಬದಲು ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸದಲ್ಲಿ ತೊಡಗಬೇಕು ಎಂದು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಆಡಳಿತ ಮಂಡಳಿಗೆ ಸಲಹೆ ನೀಡಿದರು.

ಪಟ್ಟಣದ ಅಭಿವೃದ್ಧಿಗೆ ಪಂಚಾಯ್ತಿ ಆಡಳಿತ ಮಂಡಳಿ ಸದಸ್ಯರೊಂದಿಗೆ ನಾಗರಿಕರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಸಂವಾದದಲ್ಲಿ ತೀರ್ಮಾನಿಸಲಾದ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಪಂಚಾಯ್ತಿ ಆಡಳಿತಕ್ಕೆ ಒಂದು ವಾರದ ಗಡುವು ನೀಡಿ ನಂತರ ಸಮನ್ವಯ ಸಮಿತಿ ಸಭೆ ಕರೆಯಬೇಕು ಎಂದು ತೀರ್ಮಾನಿಸಲಾಯಿತು.

ಪಟ್ಟಣದ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ವಿವಿಧ ಯೋಜನೆಯಡಿ ಬಿಡುಗಡೆಗೊಂಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಗತ್ಯ ಕಾಮಗಾರಿಯನ್ನು ನಿರ್ವಹಿಸಬೇಕು. ಪಂಚಾಯ್ತಿ ಸದಸ್ಯರು ಬಾಕಿ ಇರುವ ಆಡಳಿತಾವಧಿಯಲ್ಲಿ ಪಟ್ಟಣದ ಮೂಲ ಸೌಕರ್ಯ ಕಲ್ಪಿಸಲು ಸಮಸ್ಯೆಗಳ ಪಟ್ಟಿ ಮಾಡಿ ಅವುಗಳನ್ನು ಆದ್ಯತಾನುಸಾರ ಪರಿಹರಿಸಲು ಕೈಗೊಳ್ಳಬೇಕಾದ ಕಾರ್ಯಯೋಜನೆ ರೂಪಿಸಿ ಅನುಷ್ಠಾನ ಗೊಳಿಸಲು ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಎಸ್.ಎನ್.ನರಸಿಂಹಮೂರ್ತಿ, ಮುಖಂಡರಾದ ಜಿ.ಎಲ್.ನಾಗರಾಜ್, ಟಿ.ಆರ್.ಶರವಣಕುಮಾರ್ ಒತ್ತಾ ಯಿಸಿದರು.

ಉದ್ಯಾನವನ ನಿರ್ಮಾಣಕ್ಕೆ ಸಂಬಂಧಿ ಸಿದಂತೆ ಪಂಚಾಯ್ತಿ ಸದಸ್ಯರೊಬ್ಬರು ಗುತ್ತಿಗೆದಾರರಿಂದ ಲಂಚ ಕೇಳಿದ್ದಾರೆ ಎಂಬ ವಿಷಯ ಪ್ರಸ್ತಾಪ ಸಭೆಯಲ್ಲಿ ಕೆಲಕಾಲ ತೀವ್ರ ವಾದ ವಿವಾದಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಚರ್ಚೆ ವಿಕೋಪಕ್ಕೆ ತೆರಳಿದಾಗ ಸಂವಾದ ನಡೆಸುತ್ತಿದ್ದ  ಸಾಹಿತಿ ಭಾರದ್ವಾಜ ಕಣಿವೆ ಸಭೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧಿ ಸಿದ್ದರೂ ಇದು ಸಮರ್ಪಕವಾಗಿ ಅನು ಷ್ಠಾನಗೊಳಿಸದಿರುವ ಬಗ್ಗೆ ಎಸ್.ಕೆ. ಸತೀಶ್ ಪ್ರಶ್ನಿಸಿದರು. ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ನಿರೀಕ್ಷಿಸಿದಷ್ಟು ಅಭಿವೃದ್ಧಿ ಕೆಲಸ ಆಗದಿರುವ ಬಗ್ಗೆ ಕೆ.ಎಸ್.ರಾಜಶೇಖರ್, ಟಿ.ಆರ್. ಶರವಣಕುಮಾರ್ ಅಸಮಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದ್ದರೂ ಇದರ ಅಭಿವೃದ್ಧಿ ಬಗ್ಗೆ ಪಂಚಾಯ್ತಿ ನಿರ್ಲಕ್ಷ್ಯಧೋರಣೆ ವಹಿ ಸಿದೆ ಎಂದು ದೂರಿದ ಜಿ.ಎಲ್.ನಾಗ ರಾಜ್, ಪಟ್ಟಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಿರ್ಮಿಸ ಲುದ್ದೇಶಿಸಿರುವ ಕಲಾ ಭವನ ನಿರ್ಮಾ ಣಕ್ಕೆ ಪಂಚಾಯ್ತಿ ವತಿಯಿಂದ ಸೂಕ್ತ ಜಾಗ ನೀಡಬೇಕು ಎಂದು ಒತ್ತಾ ಯಿಸಿದರು.

ಪಂಚಾಯ್ತಿಯ ನಾಮ ನಿರ್ದೇಶಿತ ಸದಸ್ಯ ಎಂ.ವಿ.ನಾರಾಯಣ ಮಾತ ನಾಡಿ, ಪಂಚಾಯ್ತಿಯಲ್ಲಿ ಸದಸ್ಯರಲ್ಲಿ ಸಮನ್ವಯತೆ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಸಭಿಕರು ಪಂಚಾಯ್ತಿ ಸದಸ್ಯರೇ ಆಡಳಿತ ವ್ಯವಸ್ಥೆ ವಿರುದ್ಧ ದೂರುತ್ತಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಎನ್. ಎನ್.ಚರಣ್, ಕೆ.ಆರ್.ರವಿಕುಮಾರ್ ಹೇಳಿದರು.

ಜಿ.ಪಂ.ಮಾಜಿ ಉಪಾಧ್ಯಕ್ಷೆ ಕಮಲಾ ಗಣಪತಿ ಮಾತನಾಡಿ, ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ವಿಶೇಷ ಗಮನಹರಿಸಬೇಕು ಎಂದರು.

ವಕೀಲ ಆರ್.ಕೆ.ನಾಗೇಂದ್ರಬಾಬು, ಪ.ಪಂ.ಸದಸ್ಯ ಅಬ್ದುಲ್ ಖಾದರ್, ವಿ.ಎನ್.ಮಹೇಶ್, ಜೋಸೆಫ್ ವಿಕ್ಟರ್ ಸೋನ್ಸ್, ವಿ.ಡಿ.ಪುಂಡರೀಕಾಕ್ಷ, ಪಿ.ಪಿ. ಸತ್ಯನಾರಾಯಣ, ರೇಣುಕ, ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. 

ಪ.ಪಂ. ಸದಸ್ಯರಾದ ವಿ.ಎನ್. ಮಹೇಶ್, ಅಬ್ದುಲ್ ಖಾದರ್, ವಿವಿಧ ಸಂಘಟನೆಗಳ ಪ್ರಮುಖರಾದ ವಿ.ಎನ್. ವಸಂತಕುಮಾರ್, ಕೆ.ಎಸ್.ಮಹೇಶ್,  ವೆಂಕಟೇಶ ಪೂಜಾರಿ, ಎಚ್.ಎನ್. ರಾಮಚಂದ್ರ, ಅಬ್ದುಲ್ ಗಫೂರ್, ಎಚ್.ಡಿ.ಚಂದ್ರು, ಕೃಷ್ಣಮೂರ್ತಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.