ADVERTISEMENT

ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:45 IST
Last Updated 28 ಜನವರಿ 2012, 10:45 IST

ಕುಶಾಲನಗರ: ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸವಿತಾ ಸಮಾಜ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ರೂ. 100 ಕೋಟಿ ಅನುದಾನ ಒದಗಿಸುವುದರೊಂದಿಗೆ ಸರ್ಕಾರ ಪ್ರತ್ಯೇಕವಾಗಿ ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ರಾಜ್ಯ ಸವಿತಾ ಸಮಾಜ ಮೀಸಲಾತಿ ಒಕ್ಕೂಟದ ಅಧ್ಯಕ್ಷ ಎಂ.ಬಿ.ಶಿವಕುಮಾರ್‌ಇಲ್ಲಿ ಹೇಳಿದರು.

ಕುಶಾಲನಗರ ಪಟ್ಟಣದಲ್ಲಿ ತ್ಯಾಗರಾಜ ಸ್ವಾಮಿ ಆರಾಧನಾ ಸಮಿತಿ ಮತ್ತು ಸವಿತಾ ಸಮಾಜದ ವತಿಯಿಂದ ಇಲ್ಲಿಯ ಗಾಯತ್ರಿ ಕಲ್ಯಾಣ ಮಂದಿರದಲ್ಲಿ  ಶುಕ್ರವಾರ  ಏರ್ಪಡಿಸಿದ್ದತ್ಯಾಗರಾಜ ಸ್ವಾಮಿ ಆರಾಧನಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸವಿತಾ ಸಮಾಜಕ್ಕೆ ಸೂಕ್ತ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಸವಿತಾ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಕಳುಹಿಸಬೇಕು. ರಾಜ್ಯದಲ್ಲಿ ತಾತ್ಕಾಲಿಕವಾಗಿ ಸವಿತಾ ಸಮಾಜವನ್ನು ಪ್ರವರ್ಗ - 2 ರಿಂದ ಪ್ರವರ್ಗ -1 ಕ್ಕೆ ಸೇರ್ಪಡೆಗೊಳಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ಸವಿತಾ ಸಮಾಜದ ರಾಜ್ಯ ಸಂಚಾಲಕ ಎನ್.ಆರ್.ನಾಗೇಶ್ ಮಾತನಾಡಿ, ಸವಿತಾ ಸಮಾಜಬಾಂಧವರು ಸಂಘಟಿತರಾಗುವ ಮೂಲಕ ನ್ಯಾಯಬದ್ಧ ಹಕ್ಕಿಗಾಗಿ ಹೋರಾಟ ನಡೆಸಬೇಕು ಎಂದರು. ಸ್ಥಳೀಯ ಸವಿತಾ ಸಮಾಜದ ಅಧ್ಯಕ್ಷ ಬಿ.ಜಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮೊದಲು ನಡೆದ ಮೆರವಣಿಗೆಯನ್ನು ಆರಾಧನಾ ಸಮಿತಿಯ ಅಧ್ಯಕ್ಷ ವೈ.ಪುಟ್ಟರಾಜು ಉದ್ಘಾಟಿಸಿದರು. ಸಮಿತಿಯ ಗೌರವಾಧ್ಯಕ್ಷ ಎಂ.ವಿ.ಶ್ರೀನಿವಾಸ ಕೊಪ್ಪ, ಕಾರ್ಯದರ್ಶಿ ದೊರೆಸ್ವಾಮಿ, ಖಜಾಂಚಿ ಕೂಡಿಗೆ ದಿನೇಶ್, ದೇವರಾಜು, ಚಿನ್ನಸ್ವಾಮಿ, ಮಹಾದೇವಪ್ಪ, ವೆಂಕಟೇಶ್, ಶಿವಮೂರ್ತಿ, ಜಯಂತ್ ಮತ್ತಿತರರು ಇದ್ದರು.

ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ವಾದ್ಯಗೋಷ್ಠಿಯಲ್ಲಿ ಸ್ಯಾಕ್ಸೋಫೋನ್ , ನಾದಸ್ವರ ವಾದನ, ಡೋಲು ಬಡಿತ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.