ADVERTISEMENT

ಹದಗೆಟ್ಟ ಭಾಗಮಂಡಲ ರಸ್ತೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 9:06 IST
Last Updated 7 ಅಕ್ಟೋಬರ್ 2017, 9:06 IST
ಭಾಗಮಂಡಲ ಸಮೀಪದ ಮುಖ್ಯರಸ್ತೆಯಲ್ಲಿ ನಿರ್ಮಿಸಲಾಗಿರುವ ಸೇತುವೆ ದುಸ್ತಿತಿಯಲ್ಲಿದೆ
ಭಾಗಮಂಡಲ ಸಮೀಪದ ಮುಖ್ಯರಸ್ತೆಯಲ್ಲಿ ನಿರ್ಮಿಸಲಾಗಿರುವ ಸೇತುವೆ ದುಸ್ತಿತಿಯಲ್ಲಿದೆ   

ನಾಪೋಕ್ಲು: ಮಡಿಕೇರಿ – ಭಾಗಮಂಡಲ ಮುಖ್ಯರಸ್ತೆಯಲ್ಲಿ ಸಂಚರಿಸುವ ಮಂದಿಗೆ ಹೊಂಡಗುಂಡಿಗಳ ರಸ್ತೆಯು ನರಕದರ್ಶನ ಮಾಡಿಸುತ್ತಿವೆ. ಭಾಗಮಂಡಲ ಪುಣ್ಯಕ್ಷೇತ್ರವನ್ನು ಸಂದರ್ಶಿಸಲು ಬರುವ ಪ್ರವಾಸಿಗರಿಗೆ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯು ಸುಸ್ತು ಮಾಡಿಸುತ್ತದೆ. ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಹೊಂಡಗುಂಡಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದೆ ನರಕದ ಹಾದಿಯಲ್ಲಿ ಭಾಗಮಂಡಲ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾಗಮಂಡಲ ಸಮೀಪದ ಮುಖ್ಯರಸ್ತೆಯಲ್ಲಿರುವ ಸೇತುವೆ ಅವ್ಯವಸ್ಥೆಯಿಂದ ಕೂಡಿದೆ. ₹65ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಸೇತುವೆ ಉದ್ಘಾಟನೆಗೊಳ್ಳುವ ಮೊದಲೇ ಒಂದು ಪಾರ್ಶ್ವವು ಕುಸಿದು ಹೋಗಿದ್ದು ಸಂಚಾರಕ್ಕೆ ಮುಕ್ತವಾಗಿಲ್ಲ.

ಬದಲಿಗೆ ಕಿರಿದಾದ ಸೇತುವೆಯಲ್ಲೇ ವಾಹನಗಳು ಸಂಚರಿಸಬೇಕಾಗಿದೆ. ತುಲಾಸಂಕ್ರಮಣ ಜಾತ್ರೆಯು ಸಮೀಪಿಸುತ್ತಿದ್ದು ಮತ್ತಷ್ಟು ವಾಹನಗಳು ಹಾಗೂ ಪ್ರವಾಸಿಗರು ಭೇಟಿ ನೀಡುವ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ದಾರಿಯ ಬದಿಯಲ್ಲಿ ಮಳೆಯಿಂದ ಕುಸಿದ ಬೆಟ್ಟದ ಮಣ್ಣು ರಾಶಿ ಬಿದ್ದಿದೆ. ಪುಣ್ಯಕ್ಷೇತ್ರಗಳ ರಸ್ತೆಯನ್ನು ಶೀಘ್ರವೇ ಅಭಿವೃದ್ದಿಪಡಿಸಬೇಕಾಗಿದೆ ಎಂಬುದು ಭಾಗಮಂಡಲ ನಿವಾಸಿಗಳ ಒತ್ತಾಯ.

ADVERTISEMENT

ಮಡಿಕೇರಿ – ಭಾಗಮಂಡಲ ಮುಖ್ಯರಸ್ತೆಯ ಚೇರಂಬಾಣೆಯಿಂದ ಸಂಪರ್ಕ ಕಲ್ಪಿಸುವ ಬೇಂಗೂರು ಹಾಗೂ ಬಾಡಗ ಗ್ರಾಮಗಳ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು,
ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಈಚೆಗೆ ಪ್ರತಿಭಟನೆ ನಡೆಸಿದ್ದರು.

ಗ್ರಾಮಗಳ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನಗಳ ಸಂಚಾರ ಹಾಗೂ ಜನರ ಓಡಾಟಕ್ಕೂ ತೊಂದರೆಯಾಗಿದೆ. ಮಳೆಯಿಂದಾಗಿ ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಸರು ನೀರು ತುಂಬಿ ಸಮಸ್ಯೆಯಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದಿಂದ ರಸ್ತೆ ದುರಸ್ತಿಗಾಗಿ ಹಣ ಬಿಡುಗಡೆಯಾಗುತ್ತಿಲ್ಲ. ಗ್ರಾಮಪಂಚಾಯಿತಿ ವತಿಯಿಂದ ರಸ್ತೆ ಡಾಂಬರೀಕರಣಗೊಳ್ಳಲು ಹಣವಿಲ್ಲ. ರಾಜ್ಯಸರ್ಕಾರದ ನಿರ್ಲಕ್ಷ್ಯದಿಂದ ಸಮಸ್ಯೆ ಉದ್ಭವಿಸಿದೆ. ರಸ್ತೆ ನಿರ್ವಹಣೆಗೆ ಹಣ ಬಿಡುಗಡೆಯಾದಲ್ಲಿ ರಸ್ತೆ ದುರಸ್ತಿ ಕೈಗೊಳ್ಳಲಾಗುವುದು ಎಂದು ಗ್ರಾಮಪಂಚಾಯಿತಿ ಸದಸ್ಯ ಸುಮನ್‌ ಪ್ರತಿಕ್ರಿಯಿಸಿದರು. ಗ್ರಾಮಸ್ಥರಾದ ಅಯ್ಯಂಡ ಸತೀಶ್‌, ಮಂದಪಂಡ ಮನೋಜ್‌ಮಂದಣ್ಣ, ಪಟ್ಟಮಾಡ ಉದಯ್‌, ವಾಹನ ಮಾಲಿಕರ ಸಂಘದ ಅಧ್ಯಕ್ಷ ಬೆಳ್ಳಿಯನ ರವಿ, ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.