ADVERTISEMENT

ಸಿದ್ದಾಪುರ: ₹ 20 ಲಕ್ಷ ಮೌಲ್ಯದ ಬೀಟೆ ನಾಟಾ ವಶ, ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 2:16 IST
Last Updated 7 ಸೆಪ್ಟೆಂಬರ್ 2020, 2:16 IST
ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ನಾಟಾಗಳನ್ನು ಲಾರಿ ಸಮೇತ ಆರೋಪಿಯನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿರುವುದು
ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ನಾಟಾಗಳನ್ನು ಲಾರಿ ಸಮೇತ ಆರೋಪಿಯನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿರುವುದು   

ಸಿದ್ದಾಪುರ: ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬೀಟೆ ಮರದ ನಾಟಾಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾಮದ ನಿವಾಸಿ ರಾಜೇಶ್ ಅವರ ಕಾಫಿ ತೋಟದಲ್ಲಿದ್ದ ಬೀಟೆ ಮರವನ್ನು ಅಕ್ರಮವಾಗಿ ಕಡಿದು, ಭಾನುವಾರ ಬೆಳಗಿನ ಜಾವ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಸುಳಿವಿನ ಮೇರೆಗೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ನೆಲ್ಯಹುದಿಕೇರಿ ಗ್ರಾಮದ ನಿವಾಸಿ ಫಾರೂಕ್ (32) ಎಂಬಾತನನ್ನು ಬಂಧಿಸಿ, ಸುಮಾರು ₹ 20 ಲಕ್ಷ ಮೌಲ್ಯದ ನಾಟಾ ವಶಪಡಿಸಿಕೊಂಡಿದ್ದಾರೆ.

ತೋಟದ ಮಾಲೀಕ ರಾಜೇಶ್, ಲಾರಿ ಮಾಲೀಕ ಬಂಟ್ವಾಳ ತಾಲ್ಲೂಕಿನ ಇಸ್ಮಾಯಿಲ್ ಬ್ಯಾರಿ, ನಲ್ವತ್ತೇಕ್ರೆ ನಿವಾಸಿ ಅಬು, ಇಂಜಲಗರೆ ನಿವಾಸಿ ಶಫೀಕ್, ನೆಲ್ಯಹುದಿಕೇರಿ ಎಂ.ಜಿ ಕಾಲೊನಿಯ ನಿವಾಸಿ ಪಿ.ಎನ್. ರಮಸಾದ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ADVERTISEMENT

ಮಡಿಕೇರಿ ವಿಭಾಗ ಡಿಎಫ್ಓ ಪ್ರಭಾಕರ್ ಹಾಗೂ ಎಸಿಎಫ್ ನೆಹರೂ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಉಪವಲಯ ಅರಣ್ಯಾಧಿಕಾರಿ ಕುಡಕಂಡಿ ಸುಬ್ರಾಯ, ಸಿಬ್ಬಂದಿ ಚರಣ್, ಜಗದೀಶ್, ಅಪ್ಪಸ್ವಾಮಿ, ದುರ್ಗೇಶ್, ತಿಲಕ್, ಅಶೋಕ್, ಚಾಲಕ ವಾಸುದೇವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.