ADVERTISEMENT

₹ 36 ಲಕ್ಷ ಮೌಲ್ಯದ ಅವಧಿ ಮೀರಿದ ಮದ್ಯ ನಾಶ

ಲಾಕ್‌ಡೌನ್ ಪರಿಣಾಮ: ಮಾರಾಟವಾಗದೆ ಉಳಿದ ಬಿಯರ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 15:45 IST
Last Updated 26 ಆಗಸ್ಟ್ 2020, 15:45 IST
ಕುಶಾಲನಗರ ಸಮೀಪದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಪಾನೀಯ ನಿಗಮದ ಆವರಣದಲ್ಲಿ ಅವಧಿ ಮೀರಿದ ಬಿಯರ್‌ಗಳನ್ನು ಅಬಕಾರಿ ಅಧಿಕಾರಿಗಳು ಬುಧವಾರ ನಾಶಪಡಿಸಿದರು
ಕುಶಾಲನಗರ ಸಮೀಪದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಪಾನೀಯ ನಿಗಮದ ಆವರಣದಲ್ಲಿ ಅವಧಿ ಮೀರಿದ ಬಿಯರ್‌ಗಳನ್ನು ಅಬಕಾರಿ ಅಧಿಕಾರಿಗಳು ಬುಧವಾರ ನಾಶಪಡಿಸಿದರು   

ಕುಶಾಲನಗರ: ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಇಲ್ಲಿನ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮದ್ಯ ಮಳಿಗೆಯಲ್ಲಿ ಮಾರಾಟವಾಗದೇ ಉಳಿದ ಅವಧಿ ಮುಗಿದ ₹ 36 ಲಕ್ಷ ಮೌಲ್ಯದ ಮದ್ಯವನ್ನು ಬುಧವಾರ ಕೂಡ್ಲೂರು ಕೈಗಾರಿಕಾ ಬಡಾವಣೆಯ ಮಳಿಗೆ ಆವರಣದಲ್ಲಿ ನಾಶಪಡಿಸಲಾಯಿತು.

ಲಾಕ್‌ಡೌನ್ ಕಾರಣ ಏಪ್ರಿಲ್– ಮೇ ದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಬೇಸಿಗೆ ಅವಧಿಯಲ್ಲಿ ಮಾತ್ರ ಬಿಯರ್ ವ್ಯಾಪಾರ ಅಧಿಕವಾಗಿರುತ್ತದೆ. ಅಲ್ಲದೇ ಮದ್ಯ ಪ್ರಿಯರು ಕೂಡ ಬಿಯರ್ ಉಪಯೋಗಿಸುತ್ತಾರೆ. ಆದರೆ, ಇದೇ ಸಮಯದಲ್ಲಿ ಮಾರಾಟವಿಲ್ಲದ್ದರಿಂದ ನಿಗಮದಲ್ಲಿ ಬಿಯರ್ ಬಾಕ್ಸ್‌ಗಳು ಹಾಗಿಯೇ ಉಳಿದಿವೆ. ನಂತರ ಮಾರಾಟ ಆರಂಭವಾದರೂ ಮಳೆಗಾಲ ಶುರುವಾಗಿದ್ದರಿಂದ ಬಿಯರ್ ಖರೀದಿಸಲು ಬಹುತೇಕ ಅಂಗಡಿಯವರು ಆಸಕ್ತಿ ತೋರಲಿಲ್ಲ. ಇದರಿಂದಾಗಿ ಪಾನೀಯ ನಿಗಮ ಘಟಕದಲ್ಲಿ ಲಕ್ಷಾಂತರ ಮೌಲ್ಯದ ವಿವಿಧ ಬ್ರಾಂಡ್‌ನ ಬಿಯರ್‌ಗಳು ಉಳಿದಿವೆ.

‘ಅವಧಿ‌ ಮೀರಿದ 10 ಬ್ರಾಂಡ್‌ನ 2,086 ಬಾಕ್ಸ್ ಬಿಯರ್ ಅನ್ನು ಮಾನವ ಸೇವನೆಗೆ ಯೋಗ್ಯವಲ್ಲ ಎಂದು ಪರಿಗಣಿಸಿ ನಿಗಮದ ಆವರಣದಲ್ಲಿ ಅಬಕಾರಿ, ಪೊಲೀಸ್, ಕಂದಾಯ, ಪಾನೀಯ ನಿಗಮದ ಅಧಿಕಾರಿಗಳ ಸಮಕ್ಷಮದಲ್ಲಿ ನಾಶಪಡಿಸಲಾಗಿದೆ’ ಎಂದು ಅಬಕಾರಿ ಇಲಾಖೆಯ ಪ್ರಭಾರ ಉಪ ಅಧೀಕ್ಷಕಿ ಆರ್.ಎಂ.ಚೈತ್ರಾ ಹೇಳಿದರು.

ADVERTISEMENT

ಪಾನೀಯ ನಿಗಮದ ವ್ಯವಸ್ಥಾಪಕ ವಿಠಲ ಕದಂ, ಸೋಮವಾರಪೇಟೆ ವಿಭಾಗದ ಅಬಕಾರಿ ನಿರೀಕ್ಷಕ ಎಂ.ಪಿ.ಸಂಪತ್‌ಕುಮಾರ್, ಪ್ರಭಾರ ಅಬಕಾರಿ ನಿರೀಕ್ಷಕ ಎ.ಮಂಜು, ಗ್ರಾಮೀಣ ಠಾಣೆ ಪಿಎಸ್‌ಐ ನಂದೀಶ್ ಕುಮಾರ್, ಕಂದಾಯ ಇಲಾಖೆಯ ಪೇರ್ ಮಹಮ್ಮದ್ ಹಾಗೂ ಪಾನೀಯ ನಿಗಮದ ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.