ADVERTISEMENT

ನಿಯಮ ಉಲ್ಲಂಘಿಸಿ ಶಾಲಾ ದಾಖಲಾತಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 10:14 IST
Last Updated 20 ಜನವರಿ 2018, 10:14 IST
ಕುಶಾಲನಗರದ ಫಾತಿಮ ಕಾನ್ವೆಂಟ್ ನರ್ಸರಿ ಶಾಲೆ ಮಕ್ಕಳ ದಾಖಲಾತಿಗಾಗಿ ಹೊರಡಿಸಿರುವ ಪ್ರಕಟಣೆ
ಕುಶಾಲನಗರದ ಫಾತಿಮ ಕಾನ್ವೆಂಟ್ ನರ್ಸರಿ ಶಾಲೆ ಮಕ್ಕಳ ದಾಖಲಾತಿಗಾಗಿ ಹೊರಡಿಸಿರುವ ಪ್ರಕಟಣೆ   

ಕುಶಾಲನಗರ: 2017– 18ನೇ ಸಾಲಿನ ಶೈಕ್ಷಣಿಕ ವರ್ಷ ಮುಗಿಯುವ ಮುನ್ನವೇ ಇಲ್ಲಿನ ಖಾಸಗಿ ಶಾಲೆಯೊಂದು ಶಾಲಾ ದಾಖಲಾತಿಗಾಗಿ ಅರ್ಜಿ ಆಹ್ವಾನಿಸುವ ಮೂಲಕ ಶಿಕ್ಷಣ ಇಲಾಖೆಯ ನಿಯಮವನ್ನು ಉಲ್ಲಂಘಿಸಿದೆ.

ಇಲ್ಲಿನ ಫಾತಿಮ ಕಾನ್ವೆಂಟ್ ನರ್ಸರಿ ಶಾಲೆ ಶಾಲಾ ದಾಖಲಾತಿಗಾಗಿ ಸಿದ್ಧತೆ ಕೈಗೊಂಡಿದೆ. ಶಿಕ್ಷಣ ಸಚಿವ ತನ್ವಿರ್ ಶೇಠ್ ಅವರು ಯಾವುದೇ ಖಾಸಗಿ ಶಾಲೆಗಳು ಶೈಕ್ಷಣಿಕ ವರ್ಷ ಮುಗಿಯುವ ಮುನ್ನವೇ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬಾರದು. ಜೂನ್ ಮೊದಲವಾರದಲ್ಲಿಯೇ ಮೊದಲು ಬಂದವರಿಗೆ ಆಧ್ಯತೆ ನೀಡುವ ಮೂಲಕ ಪ್ರವೇಶ ನೀಡಬೇಕು.

ಮುಂಗಡವಾಗಿ ಪ್ರವೇಶಾತಿ ಮಾಡಿಕೊಳ್ಳುವ ಶಾಲೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಈ ಆದೇಶವನ್ನು ಗಾಳಿಗೆ ತೂರಿರುವ ಫಾತಿಮ ಕಾನ್ವೆಂಟ್ ಆಡಳಿತ ಮಂಡಳಿ ಎಲ್‌ಕೆಜಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಬಯಸುವ ಪೋಷಕರು ಮಾ. 1ರಿಂದ 3ರ ವರೆಗೆ ಮೌಖಿಕ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದೆ.

ADVERTISEMENT

‘ಆಯ್ಕೆಗೆ ಅರ್ಹರಾದ ಮಕ್ಕಳಿಗೆ ಅರ್ಜಿಯನ್ನು ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ಮಾ. 10ರ ಒಳಗೆ ಶಾಲೆಗೆ ಸಲ್ಲಿಸಬೇಕು. ಏಪ್ರಿಲ್ ಮೊದಲವಾರದಲ್ಲಿ ದಾಖಲಾತಿಯ ಫಲಿತಾಂಶವನ್ನು ತಿಳಿಸಲಾಗುವುದು ಎಂದು ಶಾಲಾ ಮುಖ್ಯೋಪಧ್ಯಾಯರು ಶಾಲಾ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿದ್ದಾರೆ’ ಎಂದು ಆಶ್ರಫ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.