ಗೋಣಿಕೊಪ್ಪಲು: ಧಾರ್ಮಿಕ ತತ್ವಗಳನ್ನು ರಾಜಕೀಯ ಪಕ್ಷಗಳಿಂದ ಕಲಿಯಬಾರದು. ಬದಲಾಗಿ ಪರಂಪರೆಯಿಂದ ಕಲಿಯಬೇಕು ಎಂದು ಪುತ್ತೂರು ಕುಂಬ್ರದ ಪ್ರೊ. ಅನೀಸ್ ಕೌಸರಿ ಹೇಳಿದರು.
ಪಾಲಿಬೆಟ್ಟದಲ್ಲಿ ಸೋಮವಾರ ಆರ್ಕಾಡ್ ಪಠಾಣ್ ಬಾಬ ಶಾಹ್ವಲಿ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತ ಶ್ರೇಷ್ಠರು ಈ ದೇಶದ ಹಲವು ಧರ್ಮಗಳನ್ನು ಸೃಷ್ಠಿಸಿದ್ದಾರೆ. ಅವರು ಹುಟ್ಟುಹಾಕಿದ ಧರ್ಮದ ಪರಂಪರೆ ಮಾನವೀಯತೆಯಿಂದ ಕೂಡಿದೆ. ಇಂತಹ ಶ್ರೇಷ್ಠರ ತತ್ವಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಮನುಷ್ಯತ್ವದ ತಳಹದಿಯ ಮೇಲೆ ಧರ್ಮವನ್ನು ಬೆಳೆಸಬೇಕು ಎಂದು ಕಿವಿ ಮಾತು ಹೇಳಿದರು.
ಎಲ್ಲ ಧರ್ಮಗಳು ವಿಭಿನ್ನ ಸಂಸ್ಕೃತಿ, ಆಚಾರ ವಿಚಾರಗಳನ್ನು ಬೋಧಿಸಿದರೂ ಅವೆಲ್ಲ ಒಂದೇ ಅಂಶವನ್ನು ಒಳಗೊಂಡಿವೆ. ಅದೇ ಮಾನವೀಯತೆ. ರಾಜಕೀಯ ಪ್ರೇರಿತ ಸಂಘಟನೆಗಳಿಂದ ಕೋಮುವಾದ ಬೆಳೆಯುತ್ತಿದೆ. ಇಂತಹ ಸಂಘನೆಗಳು ಕರಾವಳಿಯನ್ನು ಅಪಖ್ಯಾತಿಗೆ ಈಡುಮಾಡಿವೆ. ವಾಸ್ತವವಾಗಿ ಅಲ್ಲಿನ ಜನರು ಶಾಂತಿ ಸೌಹಾರ್ದತೆ ಬಯಸುವವರು. ಆದರೆ ರಾಜಕೀಯ ವ್ಯಕ್ತಿಗಳು ಇದಕ್ಕೆ ಅಡ್ಡಿಯಾಗಿದ್ದಾರೆ ಎಂದು ದೂರಿದರು.
ಮುಖಂಡ ಕೊಲ್ಲೀರ ಧರ್ಮಜ ಮಾತನಾಡಿ, ಜಾಗತಿಕ ಸಂದರ್ಭದಲ್ಲಿ ದೇಶ ದೇಶಗಳು ಪರಸ್ಪರ ಸಹೋದರರ ರೀತಿಯಲ್ಲಿ ಬದುಕುಬೇಕಾದ ಸನ್ನಿವೇಶ ಬಂದಿದೆ ಎಂದು ಹೇಳಿದರು.
ಎಡಪಾಲದ ಉಲಮಾ ಸಂಸ್ಥೆ ಅಧ್ಯಕ್ಷ ಕೆ.ಎ.ಮಹಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ,
ಎಡಿಎಲ್ ಆರ್.ಕೆ.ಪಿ.ಶಂಸುದ್ದೀನ್, ರಾಜ್ಯ ವಕ್ಫ್ ಮಂಡಳಿ ಸದಸ್ಯ ಅಬ್ದುಲ್ ರೆಹಮಾನ್, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಪಿ.ಬೋಪಣ್ಣ, ಹೊಸೂರು
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಪಿಡಿಒ ಎ.ಎ.ಅಬ್ದುಲ್ಲ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಎಂ.ಕಾಳಪ್ಪ, ಸ್ಥಳೀಯ ಜಮಾಅತ್ ಸಂಘದ
ಅಧ್ಯಕ್ಷ ಅಬ್ದುಲ್ ಜಬ್ಬಾರ್, ಉಪಾಧ್ಯಕ್ಷ ಸಿ.ಎಚ್.ಅಬ್ದುಲ್ ಖಾದರ್, ಉರೂಸ್ ಸಮಿತಿ ಸದಸ್ಯ ಸಿ.ಎಸ್.ಫಯಾಜ್ ಆಹಮದ್ ಹಾಜರಿದ್ದರು. ಸರ್ವಧರ್ಮೀಯರು ಉರುಸ್ನಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.