ADVERTISEMENT

ಕೊಡಗಿನಲ್ಲಿ 69 ಹೊಸ ಶಾಸನಗಳು ಪತ್ತೆ

ಅಪಾಯದಂಚಿನಲ್ಲಿ‌ ಸ್ಮಾರಕ, ಶಿಲಾಸಮಾಧಿ

ಕೆ.ಎಸ್.ಗಿರೀಶ್
Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಶಾಸನದ ಪರಿಶೀಲನೆಯಲ್ಲಿರುವ ಕ್ಯೂರೇಟರ್ ರೇಖಾ
ಶಾಸನದ ಪರಿಶೀಲನೆಯಲ್ಲಿರುವ ಕ್ಯೂರೇಟರ್ ರೇಖಾ   

ಮಡಿಕೇರಿ: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ‌69 ಶಾಸನಗಳನ್ನು ಸಂಶೋಧಿಸಿದ್ದು, ಓದುವ ಕಾರ್ಯ ನಡೆಸುತ್ತಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಅತ್ಯಧಿಕ 34, ಕುಶಾಲನಗರ ತಾಲ್ಲೂಕಿನಲ್ಲಿ 18 ಹಾಗೂ ಮಡಿಕೇರಿ ತಾಲ್ಲೂಕಿನಲ್ಲಿ 17 ಶಾಸನಗಳು ಪತ್ತೆಯಾಗಿವೆ. ಇವುಗಳು ಈ ಹಿಂದೆ ಪ್ರಕಟಗೊಂಡಿರುವ ಶಾಸನ ಸಂಪುಟಗಳಾದ ‘ಎಪಿಗ್ರಾಫಿಯಾ ಕರ್ಣಾಟಿಕಾ’, ‘ಇತಿಹಾಸ ದರ್ಶನ’ ಸೇರಿದಂತೆ ಯಾವುದೇ ಗ್ರಂಥದಲ್ಲೂ ಉಲ್ಲೇಖವಾಗಿಲ್ಲ.

ಸಿಕ್ಕಿರುವ ಶಾಸನಗಳು 7ನೇ ಶತಮಾನದಿಂದ 18ನೇ ಶತಮಾನಗಳವರೆಗಿನ ಕಾಲಕ್ಕೆ ಸೇರಿದವು. ಇದರ ಜೊತೆಗೆ, ಈ ಹಿಂದೆ ವಿವಿಧ ಸಂಪುಟಗಳಲ್ಲಿ ಪ್ರಕಟಗೊಂಡಿರುವ ಶಾಸನಗಳನ್ನೂ ಗುರುತಿಸಿ, ಅವುಗಳ ಈಗಿನ ಸ್ಥಿತಿಯನ್ನೂ ಪರಿಶೀಲಿಸಲಾಗಿದೆ.

ADVERTISEMENT

2020ರಿಂದ ಇಲ್ಲಿಯವರೆಗೆ ಇಲಾಖೆಯ ಕ್ಯುರೇಟರ್ ರೇಖಾ ಅವರು ಒಟ್ಟು 406 ಹಳ್ಳಿಗಳಿಗೆ ಭೇಟಿ ನೀಡಿ ಪತ್ತೆ ಕಾರ್ಯ ನಡೆಸಿದ್ದಾರೆ. ಶಾಸನಗಳ ಜೊತೆಗೆ ಶಿಲಾಯುಗದಿಂದ 19ನೇ ಶತಮಾನದವರೆಗಿನ ಸ್ಮಾರಕಗಳೂ ಸಿಕ್ಕಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರೇಖಾ, ‘ಶಾಸನಗಳನ್ನು ಮೈಸೂರಿನ ವಿದ್ವಾಂಸ ಎಚ್.ಎಂ.ನಾಗರಾಜರಾವ್ ಅವರು ಓದುತ್ತಿದ್ದು, ಶೀಘ್ರದಲ್ಲಿ ಶಾಸನದ ಪಠ್ಯ ಸಿದ್ಧವಾಗಲಿದೆ’ ಎಂದರು.

‘ಅತಿ ಅಪರೂಪವೆನಿಸುವ ಐದು ಶಿಲಾಸಮಾಧಿಗಳು ಲಭ್ಯವಾಗಿದ್ದು, ಸೋಮವಾರಪೇಟೆ ತಾಲ್ಲೂಕಿನ ಮೋರಿಕಲ್ಲು ಗ್ರಾಮದಲ್ಲಿರುವ ಸಮಾಧಿಗಳು ಅಳಿವಿನಂಚಿನಲ್ಲಿವೆ. ಮಡಿಕೇರಿ ತಾಲ್ಲೂಕಿನಲ್ಲಿರುವ 175 ಸ್ಮಾರಕಗಳ ಪೈಕಿ ಕಾಂತೂರು ಹಾಗೂ ಐಕೊಳದ ಅರಮನೆಗಳು, ಕಗ್ಗೋಡ್ಲುವಿನ ಮಹಾವಿಷ್ಣು ದೇಗುಲ, ಕುಂದಚೇರಿಯ ಈಶ್ವರ ದೇಗುಲ, ಸಿಂಗತ್ತೂರಿನ ಮಹಾವಿಷ್ಣು ದೇಗುಲ, ಕೋಕೇರಿಯ ನೀಲ್ಯಾಟು ಸಾರ್ತಾವು ದೇವಾಲಯ, ಬಾವಲಿಯ ಶ್ರೀದುರ್ಗಾ ಭಗವತಿ ದೇವಾಲಯ, ಕುಯ್ಯಂಗೇರಿಯ ಶ್ರೀವಿಷ್ಣು ದೇವಾಲಯಗಳನ್ನು ತುರ್ತಾಗಿ ಸಂರಕ್ಷಿಸಬೇಕು’ ಎಂದು ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಕೋರಿದ್ದಾರೆ.

‘ಕೊಡಗಿನಲ್ಲಿ ಮಾತ್ರವೇ ಕಂಡು ಬರುವ ಕೋಲೆಕಲ್ಲುಗಳು (ಮೃತಪಟ್ಟ ಹಿರಿಯರ ನೆನಪಿಗೆ ನೆಡುವ ಕಲ್ಲು) ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನೆ ವೇಳೆ ಸಿಕ್ಕಿವೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 246 ಕೋಲೆಕಲ್ಲುಗಳು ಸಿಕ್ಕಿದ್ದರೆ, ಕುಶಾಲನಗರ ತಾಲ್ಲೂಕಿನಲ್ಲಿ 21 ಕೋಲೆಕಲ್ಲುಗಳು ಸಿಕ್ಕಿವೆ. ಇದರೊಂದಿಗೆ 12 ವೀರಗಲ್ಲುಗಳು, 11 ಸತಿಕಲ್ಲುಗಳು, 5 ಶಿಲಾಶಿಲ್ಪಗಳೂ ಸಿಕ್ಕಿವೆ. ಇದರೊಂದಿಗೆ 15 ಗ್ರಾಮಗಳ ಸ್ಮಾರಕಗಳು ಅಪಾಯದಂಚಿನಲ್ಲಿವೆ’ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ಕುಶಾಲನಗರ ತಾಲ್ಲೂಕಿನ ಚಿಕ್ಕಅಳುವಾರ ಗ್ರಾಮದಲ್ಲಿ ಮುರಿದು ಬಿದ್ದಿರುವ ವೀರಗಲ್ಲು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮೋರಿಕಲ್ಲು ಗ್ರಾಮದಲ್ಲಿ ಅಪಾಯದಂಚಿನಲ್ಲಿರುವ ಶಿಲಾಸಮಾಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.