ಮಡಿಕೇರಿ: ‘ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಡಗು ಜಿಲ್ಲೆಯ ಶಾಸಕರನ್ನು ಕಡೆಗಣಿಸಲಾಗಿದೆ. ನಾನು ಐದು ಬಾರಿ ಗೆದ್ದು ಶಾಸಕನಾಗಿದ್ದರೂ ಹಿರಿತನಕ್ಕೆ ಗೌರವ ನೀಡಿಲ್ಲ’ ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಪಕ್ಷದ ವರಿಷ್ಠರ ವಿರುದ್ಧ ಶುಕ್ರವಾರ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.
‘ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಶಾಸಕರಿಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಪುಟದಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಹಿರಿಯ ಶಾಸಕರನ್ನು ಪಕ್ಷದ ಮುಖಂಡರೇ ಕಡೆಗಣಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೊಡಗಿನ ಜನರು ಶಾಂತಿ ಪ್ರಿಯರು. ಅವರಿಗೆ ಅನ್ಯಾಯವಾಗುವುದು ಬೇಡ. ಜಿಲ್ಲೆಯ ಜನರು ಬೀದಿಗೆ ಇಳಿದು ಹೋರಾಟ ನಡೆಸಲು ಮುಂದಾಗಿದ್ದರು. ನಾನೇ ಬೇಡವೆಂದು ಮನವಿ ಮಾಡಿಕೊಂಡಿರುವೆ’ ಎಂದರು.
‘ಅನ್ಯ ಪಕ್ಷದಿಂದ ಹತ್ತು ಮಂದಿ ಬಂದಿರುವುದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅದರಲ್ಲಿ ಮರು ಮಾತಿಲ್ಲ. ಆದರೆ, ಈ ಬಾರಿಯ ವಿಸ್ತರಣೆಯಲ್ಲಿ ಹಿರಿಯರನ್ನು ಪರಿಗಣಿಸಬೇಕಿತ್ತು. ಜಿಲ್ಲಾವಾರು ಆದ್ಯತೆ ನೀಡಬೇಕಿತ್ತು. ಮುಂದಿನ ವಿಸ್ತರಣೆಯಲ್ಲಿ ತಪ್ಪು ಸರಿಪಡಿಸುವ ಕೆಲಸ ಆಗಬೇಕು. ಇಲ್ಲದಿದ್ದರೆ ಉಳಿದವರು ಮುಂದಿನ ನಿರ್ಧಾರದ ಕುರಿತು ಚಿಂತಿಸಬೇಕಾದೀತು’ ಎಂದು ಎಚ್ಚರಿಸಿದರು.
‘ಬಿಜೆಪಿಯ ತತ್ವ, ಸಿದ್ಧಾಂತ ಉಳಿಯಬೇಕು. ಮುಂದೆಯೂ ನಮ್ಮದೇ ಸರ್ಕಾರ ಆಡಳಿತಕ್ಕೆ ಬರಬೇಕು. ಹೀಗಾಗಿ, ಮೂಲ ಬಿಜೆಪಿ ಶಾಸಕರಿಗೂ ಸಂಪುಟದಲ್ಲಿ ಆದ್ಯತೆ ನೀಡಬೇಕು’ ಎಂದು ರಂಜನ್ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.