ಕುಶಾಲನಗರ: ‘ಮನುಷ್ಯನ ಉತ್ತಮ ಆರೋಗ್ಯಕ್ಕೆ ರಕ್ತದಾನ ಉತ್ತಮ ಬೆಳವಣಿಗೆ’ ಎಂದು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ಡಾ.ಕೆ.ಪಿ.ಕರುಂಬಯ್ಯ ಹೇಳಿದರು.
ಸಮೀಪದ ಕೂಡಿಗೆಯಲ್ಲಿ ಎಸ್ವೈಎಸ್ ಸಾಂತ್ವನ ಘಟಕ ಹಾಗೂ ಜಿಲ್ಲಾಸ್ಪತ್ರೆಯಿಂದ ಜಂಟಿಯಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
‘ರಕ್ತಕ್ಕೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಹಾಗಾಗಿ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ರಕ್ತ ನೀಡಬೇಕಿದೆ. 18 ರಿಂದ 65ರ ವಯೋಮಿತಿ ಆರೋಗ್ಯವಂತ ವ್ಯಕ್ತಿಗಳು ಮೂರು, ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಧೂಮಪಾನಿಗಳು ಒಂದು ಗಂಟೆ ಬಿಟ್ಟು ರಕ್ತ ನೀಡಬಹುದು. ಬಿಪಿ ಶುಗರ್ ಇರೋರು ಕೂಡ ನೀಡಬಹುದು. ಆದರೆ, ಹೃದಯ ರೋಗಿಗಳು ಕೊಡುವಂತಿಲ್ಲ’ ಎಂದು ವಿವರಿಸಿದರು.
‘ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ 5 ರಿಂದ 6 ಲೀಟರ್ ರಕ್ತ ಇರುತ್ತದೆ. ಈ ಪೈಕಿ 350 ಮಿಲಿ ಲೀಟರ್ ರಕ್ತ ಮಾತ್ರ ಪಡೆಯಲಾಗುತ್ತದೆ. ಆಗಾಗ್ಗೆ ರಕ್ತದಾನ ಮಾಡಿದರೆ ರಕ್ತದಾನಿಗಳಲ್ಲಿ ಆರೋಗ್ಯ ವೃದ್ದಿಯಾಗುತ್ತದೆ. ಕೊಬ್ಬಿನಂಶ ಕಡಿಮೆಯಾಗುತ್ತದೆ. ಹೃದಯಸಂಬಂಧಿ ಕಾಯಿಲೆಗಳು ದೂರವಾಗುತ್ತವೆ’ ಎಂದರು.
ಸಾಂತ್ವನ ಕೇಂದ್ರದ ಕೊಡಗು ಮುಖ್ಯಸ್ಥರಾದ ಶಾಫಿಯ ಮಾತನಾಡಿ, ‘ರಕ್ತದಾನಿಗಳ ರಕ್ತ ಮನುಷ್ಯರಿಗೆ ಎರವಾಗುತ್ತದೆಯೇ ಹೊರತು ಯಾವೊಂದು ಧರ್ಮ ಅಥವಾ ಜಾತಿಯ ವ್ಯಕ್ತಿಗೆ ಸೀಮಿತವಲ್ಲ. ಸಾಂತ್ವನ ಕೇಂದ್ರದಿಂದ ಜಿಲ್ಲಾದ್ಯಂತ ತಿಂಗಳಿಗೊಂದು ರಕ್ತದಾನ ಶಿಬಿರ ಆಯೋಜಿಸಲಾಗುವುದು’ ಎಂದರು.
ಕೂಡಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ, ಜಿಲ್ಲಾ ಆರೋಗ್ಯ ಶಿಕ್ಷಣ ನಿರೀಕ್ಷಕಿ ಹೆಚ್.ಕೆ.ಶಾಂತಿ, ಡಾ.ನವತೇಜ, ಕೂಡಿಗೆ ಮಸೀದಿಯ ಖತೀಬರಾದ ಹೈದರಾಲಿ, ಶಿಹಾಬುದ್ದೀನ್, ಸಾಂತ್ವನ ಕೇಂದ್ರದ ಕೂಡಿಗೆ ಘಟಕದ ಅಧ್ಯಕ್ಷರ ಜೆ.ಹೆಚ್. ಇಸಾಕ್, ಕಾರ್ಯದರ್ಶಿ ರಜಾಕ್, ಎಸ್ ವೈ ಎಸ್ ಕೂಡಿಗೆ ಘಟಕದ ಕಾರ್ಯದರ್ಶಿ ಮೊಹಮ್ಮದ್ ಆಲಿ, ಸದಸ್ಯರಾದ ಉಸ್ಮಾನ್, ಜುಬೈರ್, ಹಕೀಫ್, ನೌಫಲ್ ಟಿ.ಪಿ.ಅಬ್ದುಲ್ ಸಲಾಂ ಭಾಗವಹಿಸಿದ್ದರು.
18 ರಿಂದ 65ರ ವಯಸ್ಸಿನವರೂ ರಕ್ತದಾನ ಮಾಡಲು ಅರ್ಹರು ಒಬ್ಬ ವ್ಯಕ್ತಿಯಿಂದ 350 ಮಿಲಿ ಲೀಟರ್ ಮಾತ್ರ ತೆಗೆಯಬಹುದು ರಕ್ತದಾನದಿಂದ ಕೊಬ್ಬಿನಂಶ ಕಡಿಮೆಯಾಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.