ADVERTISEMENT

ಸಿಇಟಿ: ಗ್ರಾಮೀಣ ವಿದ್ಯಾರ್ಥಿ ಅತುಲ್‌ಗೆ 445ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 8:10 IST
Last Updated 24 ಆಗಸ್ಟ್ 2020, 8:10 IST
ಅತುಲ್ ಟಿ.
ಅತುಲ್ ಟಿ.   

ವಿರಾಜಪೇಟೆ: ಸಮೀಪದ ಅಂಬಟ್ಟಿ ಗ್ರಾಮದ ಅತುಲ್ ಟಿ. ಈ ಬಾರಿ ಸಿಇಟಿ ಯಲ್ಲಿ 445ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳ ಪೈಕಿ ಉತ್ತಮ ಸಾಧನೆ ತೋರಿದ್ದಾನೆ.

ಗೋಣಿಕೊಪ್ಪಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಈ ಸಾಲಿನಲ್ಲಿ ದ್ವಿತೀಯ ಪಿಯುನಲ್ಲಿ ಶೇ 95 ಅಂಕಗಳೊಂದಿಗೆ ಅತುಲ್ ತೇರ್ಗಡೆಗೊಂಡಿದ್ದರು. ಈತ ಪ್ರಮೋದನ್ ಟಿ. ಹಾಗೂ ಶೈಮ ಕೆ. ದಂಪತಿ ಪುತ್ರ

ಈ ಮೂಲಕ ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ವಿದ್ಯಾಭ್ಯಾಸ ಹಾಗೂ ಕೋಚಿಂಗ್ ಪಡೆದರೆ ಮಾತ್ರ ಸಿಇಟಿಯಲ್ಲಿ ಉತ್ತಮ ರ‍್ಯಾಂಕ್ ಪಡೆಯಲು ಸಾಧ್ಯ ಎನ್ನುವುದನ್ನು ಅತುಲ್ ಸುಳ್ಳಾಗಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಕೂಡಾ ರ‍್ಯಾಂಕ್ ಪಡೆಯಬಹುದು ಎಂಬುದಕ್ಕೆ ಅತುಲ್ ಉದಾಹರಣೆಯಾಗಿದ್ದಾರೆ.

ADVERTISEMENT

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅತುಲ್, ‘ಕಾಲೇಜು ಹಾಗೂ ಉಪನ್ಯಾಸಕರಿಂದ ತನಗೆ ಸಾಕಷ್ಟು ಸಹಕಾರ ದೊರೆತಿದೆ. ವಿಶೇಷವಾಗಿ ಕಾಲೇಜಿನಲ್ಲಿನ ಸುಸಜ್ಜಿತ ಗ್ರಂಥಾಲಯ ಉತ್ತಮ ರ‍್ಯಾಂಕ್ ಪಡೆಯಲು ನೆರವಾಯಿತು. ಜೆಇಇ ಪರೀಕ್ಷೆಯ ಬಳಿಕ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಆಲೋಚಿಸುತ್ತೇನೆ’ ಎಂದರು.

ಅತುಲ್‌ನ ತಂದೆ ಪ್ರಮೋದನ್ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೆ ಉತ್ತಮ ರ‍್ಯಾಂಕ್ ಪಡೆಯಲಾಗುವುದಿಲ್ಲ ಎನ್ನುವ ಭ್ರಮೆಯನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೊದಲು ತೊರೆಯಬೇಕು. ಸ್ನೇಹಿತರಾಗಿರುವ ವಿರಾಜಪೇಟೆಯ ಚಾಣಕ್ಯ ಕೋಚಿಂಗ್ ಸೆಂಟರ್‌ನವರು ಹಾಗೂ ಕಾವೇರಿ ಕಾಲೇಜಿನ ಉಪನ್ಯಾಸಕರ ಪರಿಶ್ರಮ ಉತ್ತಮ ರ‍್ಯಾಂಕ್ ಪಡೆಯಲು ಸಹಕಾರಿಯಾಗಿದೆ. ಮಂಗಳೂರು, ಮೈಸೂರು ಎನ್ನದೇ ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಓದಿದರೆ ಕಂಡಿತ ಉತ್ತಮ ಸಾಧನೆ ಮಾಡಬಹುದು ಎನ್ನುವುದಕ್ಕೆ ಮಗ ಗಳಿಸಿದ ರ‍್ಯಾಂಕಿಂಗ್ ಉದಾಹರಣೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.