ಗೋಣಿಕೊಪ್ಪಲು: ಇಲ್ಲಿನ ಹುದಿಕೇರಿ ಜನತಾ ಪ್ರೌಢಶಾಲೆ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಮೂಕಳಮಾಡ ತಂಡ ಅಲ್ಲುಮಾಡ ತಂಡವನ್ನು 29 ರನ್ ಗಳಿಂದ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಟೂರ್ನಿಯ 6ನೇ ದಿನ, ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೂಕಳಮಾಡ ತಂಡ ನಿಗದಿತ 6 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ನಡೆಸಿದ ಅಲ್ಲುಮಾಡ ತಂಡ 7 ವಿಕೆಟ್ ಕಳೆದುಕೊಂಡು ಕೇವಲ 30 ರನ್ ಗಳಿಸುವಲ್ಲಿ ಮಾತ್ರ ಸಫಲವಾಯಿತು. ಮೂಕಳಮಾಡ ತಂಡದ ಅಯ್ಯಪ್ಪ 15 ಬಾಲ್ಗಳಲ್ಲಿ 28 ರನ್ ಗಳಿಸಿದರೆ ಸೋಮಣ್ಣ ಕೇವಲ 8 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಐಪುಮಾಡ ತಂಡ ಕಲ್ಲುಮಾಡಂಡ ತಂಡ ಎದುರು ವಾಕ್ ಓವರ್ ಪಡೆಯಿತು. ಕಾಂಡೇರ ತಂಡ ಪಟ್ಟಡ ತಂಡದ ವಿರುದ್ಧ 28 ರನ್ ಗಳಿಂದ ಜಯಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕಾಂಡೇರದ ತಂಡದ ಬ್ಯಾಟ್ಸ್ಮನ್ಗಳು ಉತ್ತಮ ಆಟವಾಡಿ ಎದುರು ತಂಡಕ್ಕೆ 70 ರನ್ಗಳ ಗುರಿ ನೀಡಿದರು. ಕಾಂಡೇರ ತಂಡದ ಡಿಂಪು 15 ಬಾಲ್ಗಳಲ್ಲಿ 46 ರನ್ ಸಿಡಿಸಿ ತಂಡ ಉತ್ತಮ ಮೊತ್ತಗಳಿಸಲು ನೆರವಾದರು. ಗೆಲುವಿನ ಗುರಿ ಬೆನ್ನತ್ತಿದ ಪಟ್ಟಡ ತಂಡ 3 ವಿಕೆಟ್ ಕಳೆದುಕೊಂಡು ಕೇವಲ 43 ರನ್ ಗಳಿಸಿತು. ಉತ್ತಮ ಬೌಲಿಂಗ್ ನಡೆಸಿದ ಕಾಂಡೇರ ತಂಡದ ಸತೀಶ್ 14 ರನ್ ನೀಡಿ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಚೀಕಂಡ ತಂಡ ಮಾಚೆಟ್ಟೀರ (ಹಾಲುಗುಂದ) ತಂಡ ವಿರುದ್ಧ 58 ರನ್ಗಳ ಭಾರಿ ಅಂತರದಿಂದ ಗೆಲುವು ಸಾಧಿಸಿತು. ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಚೀಕಂಡ ತಂಡ ಮೊದಲು ಬ್ಯಾಟಿಂಗ್ ನಡೆಸಿ 1 ವಿಕೆಟ್ ಕಳೆದುಕೊಂಡು ಎದುರು ತಂಡಕ್ಕೆ 120 ರನ್ಗಳ ಗುರಿ ನೀಡಿತು. ಉತ್ತಮ ಬ್ಯಾಟಿಂಗ್ ಮಾಡಿದ ಚೀಕಂಡ ತಂಡದ ಸಾಗರ್ ಕೇವಲ 18 ಬಾಲ್ಗಳಲ್ಲಿ 56 ರನ್ ಸಿಡಿಸಿದರು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮಾಚೆಟ್ಟೀರ ತಂಡ ಕೇವಲ 2 ವಿಕೆಟ್ ಕಳೆದುಕೊಂಡರೂ 62 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತೊಂದು ಪಂದ್ಯದಲ್ಲಿ ಮೇಕೆರಿರಿ ತಂಡ ಮೇವಡ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿತು. ಮೇವಡ ತಂಡ ನೀಡಿದ 33 ರನ್ಗಳ ಗುರಿಯನ್ನು ಸುಲಭವಾಗಿ ಎದುರಿಸಿದ ಮೇಕೆರಿರ ತಂಡ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಉಳಿದ ಪಂದ್ಯಗಳಲ್ಲಿ ಉದ್ದಪಂಡ ತಂಡ ಅಜ್ಜಮಾಡ ತಂಡದ ಎದುರು 38 ರನ್ಗಳಿಂದ ಜಯಗಳಿಸಿದರೆ, ಆದೇಂಗಡ ತಂಡ ಸರ್ಕಂಡ ತಂಡದ ವಿರುದ್ಧ 6 ವಿಕೆಟ್ಗಳಿಂದ ಗೆಲುವು ದಾಖಲಿಸಿತು. ಮತ್ತೊಂದು ಪಂದ್ಯದಲ್ಲಿ ತೀತಿರ (ಹರಿಹರ) ತಂಡ ಕಟ್ಟೇರ ತಂಡದ ವಿರುದ್ಧ 16 ರನ್ಗಳಿಂದ ಜಯಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.