ವಿರಾಜಪೇಟೆ: ಎರಡು ಶತಮಾನಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಹಾಗೂ ಜಿಲ್ಲೆಯ ಮೊದಲ ಚರ್ಚ್ ಎನಿಸಿರುವ ಪಟ್ಟಣದ ಸಂತ ಅನ್ನಮ್ಮ ಚರ್ಚ್ನಲ್ಲಿ ಕ್ರಿಸ್ತ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಚರ್ಚ್ ಹಾಗೂ ಸುತ್ತಮುತ್ತಲಿನ ಉದ್ಯಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ. ಚರ್ಚ್ ಆವರಣ ಹಾಗೂ ಉದ್ಯಾನದಲ್ಲಿನ ವಿವಿಧ ಪ್ರತಿಮೆಗಳಿಗೆ ಬಣ್ಣಗಳನ್ನು ಹಚ್ಚುವ ಮೂಲಕ ಕಂಗೊಳಿಸುವಂತೆ ಮಾಡಲಾಗಿದೆ. ಮಂಗಳವಾರ ರಾತ್ರಿ ಚರ್ಚ್ ಹಾಗೂ ಆವರಣವು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತಿತ್ತು. ಬಾಲಯೇಸುವಿನ ಜನನವನ್ನು ಸಾರುವ ಗೋದಲಿಯನ್ನು ಚರ್ಚ್ ಆವರಣದಲ್ಲಿನ ಉದ್ಯಾನದಲ್ಲಿ ನಿರ್ಮಿಸಲಾಗಿದೆ.
ವಿರಾಜಪೇಟೆ ಪಟ್ಟಣದ ನಿರ್ಮಾತೃ ವೀರರಾಜೇಂದ್ರನ ಕಾಲದಲ್ಲಿ ಅಂದರೆ 1792ರಲ್ಲಿ ನಿರ್ಮಾಣವಾದ ಸಂತ ಅನ್ನಮ್ಮ ಚರ್ಚ್ನಲ್ಲಿ ಕ್ರಿಸ್ಮಸ್ ಅಂಗವಾಗಿ ಮಂಗಳವಾರ ಮಧ್ಯರಾತ್ರಿ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ನಡೆದವು. ಬುಧವಾರ ಬೆಳಿಗ್ಗೆ 9ಕ್ಕೆ ಬಲಿಪೂಜೆ ನಡೆಯಲಿದ್ದು, ಸಂಜೆ 5ಕ್ಕೆ ವಿಶೇಷ ಕ್ಯಾರಲ್ ಗಾಯನ ನಡೆಯಲಿದೆ.
ಕರ್ನಾಟಕದ ಕರಾವಳಿಯಲ್ಲಿನ ಕ್ರೈಸ್ತರು ಬ್ರಿಟೀಷರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಟಿಪ್ಪುಸುಲ್ತಾನ್ 1784ರಲ್ಲಿ ಇಲ್ಲಿನ ಸಾವಿರಾರು ಕ್ರೈಸ್ತರನ್ನು ಸೆರೆಯಾಳುಗಳಾಗಿ ಶ್ರೀರಂಗಪಟ್ಟಣಕ್ಕೆ ಒಯ್ಯುತ್ತಾನೆ. 1791ರಲ್ಲಿ ಟಿಪ್ಪು ಹಾಗೂ ಬ್ರಿಟೀಷರ ನಡುವಿನ 3ನೇ ಆಂಗ್ಲೊ ಮೈಸೂರು ಯುದ್ಧದ ಸಂದರ್ಭ ಬಂಧಿಗಳಾಗಿದ್ದ ಕೆನರಾದ ಸಾಕಷ್ಟು ಕ್ರೈಸ್ತರು ತಪ್ಪಿಸಿಕೊಳ್ಳುತ್ತಾರೆ.
ಆದರೆ ತಮ್ಮ ತಾಯ್ನಾಡು ಇನ್ನೂ ಟಿಪ್ಪುವಿನ ವಶದಲ್ಲಿರುವುದರಿಂದ ಅಲ್ಲಿ ಹೋಗಿ ಮತ್ತೆ ನೆಲೆಸುವುದು ಅವರಿಗೆ ಕಷ್ಟಕರವಾದ್ದರಿಂದ ಅವರು ಸ್ವಾಮಿ ಜುವಾಂವ್ ಡಿಕೋಸ್ಟ ಅವರೊಂದಿಗೆ ಕೊಡಗಿನ ರಾಜ ವೀರರಾಜೇಂದ್ರನ ಆಶ್ರಯವನ್ನು ಕೇಳುತ್ತಾರೆ. ಟಿಪ್ಪುವಿನ ವಿರೋಧಿಯಾಗಿದ್ದ ವೀರರಾಜೇಂದ್ರ ಸಹಜವಾಗಿ ಈ ಕ್ರೈಸ್ತರಿಗೆ ಆಶ್ರಯ ನೀಡಿ ತಾನು ಹೊಸದಾಗಿ ಕಟ್ಟಿದ್ದ ವೀರರಾಜೇಂದ್ರಪೇಟೆಯಲ್ಲಿ (ವಿರಾಜಪೇಟೆ) ನೆಲೆಸಲು ಅಗತ್ಯ ವ್ಯವಸ್ಥೆ ಕಲ್ಪಿಸಿ ಪಟ್ಟಣದಲ್ಲಿ ಚರ್ಚ್ವೊಂದನ್ನು ಕಟ್ಟಿಸುತ್ತಾನೆ.
ಹೀಗೆ 1792ರಲ್ಲಿ ಅಸ್ತಿತ್ವಕ್ಕೆ ಬಂದ ಸಂತ ಅನ್ನಮ್ಮ ಚರ್ಚ್ಗೆ ಸ್ವಾಮಿ ಜುವಾಂವ್ ಡಿಕೋಸ್ಟ ಮೊದಲ ಧರ್ಮಗುರುವಾಗುತ್ತಾರೆ. 1848ರವರೆಗೆ ಸಂತ ಅನ್ನಮ್ಮ ದೇವಾಲಯದ ಕೊಡಗಿನ ಏಕೈಕ ಕ್ರೈಸ್ತ ದೇವಾಲಯವಾಗಿತ್ತು. 1868ರಲ್ಲಿ ವಿರಾಜಪೇಟೆ ಧರ್ಮಕೇಂದ್ರದ ಧರ್ಮಗುರು ಗಿಲೋನ್ ಅವರು ಹಳೆಯ ಚರ್ಚ್ ಇದ್ದ ಸ್ಥಳದಲ್ಲಿಯೇ ಗೋಥಿಕ್ ಮಾದರಿಯ ಈಗಿನ ಚರ್ಚ್ ಕಟ್ಟಡವನ್ನು ಕಟ್ಟಿಸಿದರು.
ಬ್ರಿಟೀಷ್ ಸರ್ಕಾರ ಹಾಗೂ ಸಾಹುಕಾರ್ ಸಾಲ್ವಾದೊರ್ ಪಿಂಟೋ ಅವರ ಸಹಾಯದಿಂದ ಸುಮಾರು 150 ಅಡಿ ಎತ್ತರದ ಸುಂದರ ಗೋಪುರವನ್ನೊಳಗೊಂಡ ಚರ್ಚ್ಅನ್ನು ಕಟ್ಟಲಾಯಿತು. ಪ್ಯಾರಿಸ್ನಿಂದ 1891ರಲ್ಲಿ ಎರಡು ದೊಡ್ಡ ಗಂಟೆಗಳನ್ನು ತರಿಸಿ ಅಳವಡಿಸಲಾಯಿತು. ಹೀಗೆ ನಿರ್ಮಾಣವಾದ ಸಂತ ಅನ್ನಮ್ಮ ಚರ್ಚ್ನ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ 2015ರಲ್ಲಿ ಧರ್ಮಗುರು ಡಾ. ಆರೋಗ್ಯ ಸ್ವಾಮಿ ಅವರ ನೇತೃತ್ವದಲ್ಲಿ ನವೀಕರಣ ಕಾರ್ಯ ನಡೆಯಿತು. ಪ್ರಸ್ತುತ ಫಾದರ್ ಜೇಮ್ಸ್ ಡೊಮೆನಿಕ್ ಅವರು ಚರ್ಚ್ನ ಪ್ರಧಾನ ಧರ್ಮಗುರುವಾಗಿ ಹಾಗೂ ಫಾದರ್ ಮದಲೈ ಮುತ್ತು ಅವರು ಸಹಾಯಕ ಧರ್ಮಗುರುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.