ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಶನಿವಾರ ಬೆಳಗಿನಿಂದಲೂ ಬಿರುಗಾಳಿಯೊಂದಿಗೆ ನಿರಂತರವಾಗಿ ಜಿನುಗು ಮಳೆ ಬಿದ್ದಿತು. ಮೋಡಕವಿದ ವಾತಾವರಣದಲ್ಲಿ ಬೀಸುತ್ತಿರುವ ಬಿರುಗಾಳಿ, ಚಳಿಗೆ ಜನರು ತತ್ತರಿಸಿ ಹೋದರು.
ಸಾಮಾನ್ಯವಾಗಿ ಎಲ್ಲರ ಮೈ ಮೇಲೂ ಶ್ವೆಟರ್, ರೈನ್ ಕೋಟ್, ಟೊಪ್ಪಿಗಳಿದ್ದು, ಕೈಯಲ್ಲಿ ಕೊಡೆ ಹಿಡಿದಿರುವುದು ಕಂಡು ಬಂದಿತು. ಬಿರುಗಾಳಿಗೆ ಕಾಫಿ ತೋಟದ ಸಿಲ್ವರ್ ಮರಗಳು ಉರುಳಿದ್ದವು. ವಿವಿಧ ಭಾಗಗಳಲ್ಲಿ ಮರಬಿದ್ದು 5 ವಿದ್ಯುತ್ ಕಂಬಗಳಿಗೆ ಹಾನಿಯಾಗಿತ್ತು. ಅವುಗಳನ್ನು ಬದಲಾಯಿಸುವ ಕಾರ್ಯ ನಡೆಯುತ್ತಿದೆ ಎಂದು ಗೋಣಿಕೊಪ್ಪಲು ಸೆಸ್ಕ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ ಹೇಳಿದರು.
ಬಾಳೆಲೆ ಗಂಧದಗುಡಿ ಕಾಲೊನಿಯ ನಿವಾಸಿ ಸುರೇಶ್ ಎಂಬವರ ಮನೆ ಗೋಡೆ ಕುಸಿದು ಬಿದ್ದು ಚಾವಣಿಗೂ ಹಾನಿಯಾಗಿದೆ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ಸುರೇಶ್ ಅವರಿಗೆ ನಿಟ್ಟೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪವನ್ ಚಿಟ್ಟಿಯಪ್ಪ ಹಾಗೂ ಬಾಳೆಲೆ ಕಾಂಗ್ರೆಸ್ ಮುಖಂಡ ಚಂದ್ರನ್ ಭೇಟಿ ನೀಡಿ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಟಾರ್ಪಾಲ್ ಹೊದಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.