ಮಡಿಕೇರಿ: ಬೆಂಗಳೂರಿನಲ್ಲಿ ದಾಖಲಾಗಿರುವ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ಗೌಡ ಅವರ ಹೆಸರನ್ನೂ ಸೇರಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿರುವುದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ಪ್ರತಿಭಟನೆಯ ಹಾದಿ ತುಳಿದಿದೆ.
ಭಾನುವಾರ ಇಲ್ಲಿ ಸೇರಿದ್ದ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕದ್ವಯರಿಗೆ ಭರಪೂರ ಬೆಂಬಲ ವ್ಯಕ್ತಪಡಿಸಿದರು. ಮಾತ್ರವಲ್ಲ, ತಾಲ್ಲೂಕು ಮಟ್ಟದಲ್ಲಿಯೂ ಪ್ರತಿಭಟನೆಗಳನ್ನು ನಡೆಸಿ, ಬಿಜೆಪಿಯ ಅಪಪ್ರಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಘೋಷಿಸಿದರು. ಈ ಮೂಲಕ ಜಿಲ್ಲೆಯ ರಾಜಕೀಯದಲ್ಲಿ ಮತ್ತೊಂದು ಬಾರಿ ಉಭಯ ಪಕ್ಷಗಳ ಮಧ್ಯೆ ಜಟಾಪಟಿ ಸೃಷ್ಟಿಯಾಗಿದೆ.
ಜಿಲ್ಲೆಯ ನಾನಾ ಕಡೆಗಳಿಂದ ಬಸ್ಗಳು ಸೇರಿದಂತೆ ವಿವಿಧ ವಾಹನಗಳಲ್ಲಿ ಬಂದಿದ್ದ ನೂರಾರು ಕಾರ್ಯಕರ್ತರು ಮೊದಲಿಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ಸೇರಿದರು. ಬಳಿಕ ಅಲ್ಲಿಂದ ಮೆರವಣಿಗೆ ಹೊರಟ ಅವರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಗುಂಪುಗೂಡಿದರು. ವೃತ್ತದ ತುಂಬೆಲ್ಲ ಅಪಾರ ಸಂಖ್ಯೆಯ ಜನರು ಸೇರಿದ್ದರಿಂದ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು. ಪ್ರತಾಪಸಿಂಹ ಅವರ ಪ್ರತಿಕೃತಿ ದಹಿಸಿದ ಅವರು ಬಿಜೆಪಿಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಅವರು ಮೆರವಣಿಗೆಯಲ್ಲಿ ಮತ್ತೆ ಗಾಂಧಿ ಮೈದಾನಕ್ಕೆ ಬಂದು ಪ್ರತಿಭಟನಾ ಸಭೆ ನಡೆಸಿದರು.
ಈ ವೇಳೆ ಪಕ್ಷದ ಸ್ಥಳೀಯ ನಾಯಕರು ಒಬ್ಬೊಬ್ಬರಾಗಿ ಮಾತನಾಡಿ ಬಿಜೆಪಿಯ ವಿರುದ್ಧ ಹರಿಹಾಯ್ದರು ಮಾತ್ರವಲ್ಲ ಶಾಸದ್ವಯರಿಗೆ ಭರಪೂರ ಬೆಂಬಲ ವ್ಯಕ್ತಪಡಿಸಿದರು. ತಾಸುಗಟ್ಟಲೆ ಕಾಲ ನಿಂತಿದ್ದ ಕಾರ್ಯಕರ್ತರು ನಾಯಕರ ಮಾತುಗಳಿಗೆ ಚಪ್ಪಾಳೆ ತಟ್ಟಿದರು. ಶಾಸಕರಿಗೆ ಬೆಂಬಲ ನೀಡಿದರು.
ಮಾತನಾಡಿದ ಬಹುತೇಕ ಎಲ್ಲ ಮುಖಂಡರು ಬಿಜೆಪಿ ಶವದ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಪದೇ ಪದೇ ಆರೋಪಿಸಿದರು. ಮಾತ್ರವಲ್ಲ, ಇಂತಹ ರಾಜಕಾರಣ ಬೇಡ ಎಂದು ಒತ್ತಾಯಿಸಿದರು.
ಬಿಜೆಪಿ ಮಾಡಿರುವ ಎಲ್ಲ ಆರೋಪಗಳನ್ನೂ ನಿರಾಕರಿಸಿದ ಮುಖಂಡರು ಆತ್ಮಹತ್ಯೆ ಪ್ರಕರಣಕ್ಕೂ ಶಾಸಕರಿಗೂ ಯಾವುದೇ ಸಂಬಂಧ ಇಲ್ಲ. ಅನಗತ್ಯವಾಗಿ ಬಿಜೆಪಿ ಶಾಸಕದ್ವಯರ ಹೆಸರುಗಳನ್ನು ಎಳೆದು ತರುತ್ತಿದೆ ಎಂದು ಆರೋಪಿಸಿದರು.
ಇನ್ನು ಮುಂದೆಯೂ ಇಂತಹ ಪ್ರತಿಭಟನೆಗಳನ್ನು ಆಯೋಜಿಸಿ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಹೇಳಿದರು.
ಮೃತ ವಿನಯ್ ಸೋಮಯ್ಯ ಅವರಿಗೆ ಸಭೆಯಲ್ಲಿ ಮೌನವನ್ನಾಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಸಾವಿಗೆ ಶೋಕ ವ್ಯಕ್ತಪಡಿಸಿದ ಎಲ್ಲ ನಾಯಕರೂ ಕುಟುಂಬದ ಜೊತೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ ಎಂದು ವಾಗ್ದಾನ ಮಾಡಿದರು.
ಗ್ಯಾರಂಟಿ ಯೋಜನೆಗಳನ್ನು ಸಹಿಸಲಾರದೇ ಬಿಜೆಪಿ ವೃಥಾ ಆರೋಪ ಮಾಡುತ್ತಿದೆ. ಹೆಣದ ಮೇಲೆ ರಾಜಕೀಯ ಮಾಡುತ್ತಿದೆ.ಎಂ.ಲಕ್ಷ್ಮಣ ಕೆಪಿಸಿಸಿ ವಕ್ತಾರ.
ಕೊಡಗಿನ ಇಬ್ಬರು ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ಗೌಡ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆವೀಣಾ ಅಚ್ಚಯ್ಯ ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ.
ವಿನಯ್ ಸೋಮಯ್ಯ ಅವರ ಆತ್ಮಕ್ಕೆ ಗೌರವ ಶಾಂತಿ ಸಿಗಲಿ ಎಂದು ಮೌನಾಚರಣೆ ಮಾಡಿದ್ದು ಕಾಂಗ್ರೆಸ್ ಸಂಸ್ಕೃತಿ. ಅವರ ಕುಟುಂಬಕ್ಕೆ ನೆರವು ನೀಡಬೇಕುಚಂದ್ರಮೌಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಬಿಜೆಪಿ ಸಾವಿನ ವ್ಯಾಪಾರ ಮಾಡುತ್ತಿದೆ. ಹೆಣದ ಮೇಲೆ ರಾಜಕೀಯ ಮಾಡುತ್ತಿದೆ. ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಬೇಕುಅರುಣ್ ಮಾಚಯ್ಯ ಕಾಂಗ್ರೆಸ್ನ ಹಿರಿಯ ಮುಖಂಡರು
ಕಾಂಗ್ರೆಸ್ನ ಇಬ್ಬರು ಶಾಸಕರ ವಿರುದ್ಧ ಆರೋಪ ಮಾಡುವ ನೈತಿಕತೆ ಪ್ರತಾಪಸಿಂಹ ಅವರಿಗೆ ಇಲ್ಲ. ಇನ್ನಾದರೂ ಇವರಿಬ್ಬರನ್ನು ನೋಡಿ ಅಸೂಯೆಪಡುವುದನ್ನು ಬಿಡಬೇಕುವಿ.ಪಿ.ಶಶಿಧರ್ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ.
ನೂರು ಸುಳ್ಳಗಳನ್ನು ಹೇಳಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಎಷ್ಟೇ ಅಪಪ್ರಚಾರ ಮಾಡಿದರೂ ಅದರ ವಿರುದ್ದ ಸೆಟೆದುನಿಂತು ಹೋರಾಡಬೇಕುಟಿ.ಪಿ.ರಮೇಶ್ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ.
ಇನ್ನು ಮುಂದೆ ಎಲ್ಲ ತಾಲ್ಲೂಕುಗಳಲ್ಲಿಯೂ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕುಧರ್ಮಜ ಉತ್ತಪ್ಪ ಕಾಂಗ್ರೆಸ್ನ ಜಿಲ್ಲಾ ಘಟಕದ ಅಧ್ಯಕ್ಷ.
ಬಿಜೆಪಿಗೆ ಮಾನವೀಯತೆ ಇದೆಯೇ? ಪೊನ್ನಣ್ಣ ಪ್ರಶ್ನೆ ಯಾರಾದರೂ ಮೃತಪಟ್ಟಾಗ ಆದಷ್ಟು ಬೇಗ ಮೃತದೇಹ ಅವರ ಕುಟುಂಬದವರಿಗೆ ಸಿಗುವಂತೆ ಮಾಡಬೇಕು. ಅಂತಿಮ ಸಂಸ್ಕಾರಕ್ಕೆ ಅನುವು ಮಾಡಿಕೊಡಬೇಕು. ಆದರೆ ಶವವನ್ನು ಇಟ್ಟುಕೊಂಡು ರಾಜಕೀಯ ಮಾಡಿದ ಬಿಜೆಪಿಗೆ ಮಾನವೀಯತೆ ಇದೆಯೇ ಎಂದು ಶಾಸಕ ಎ.ಎಸ್.ಪೊನ್ನಣ್ಣ ಪ್ರಶ್ನಿಸಿದರು. ‘ನನಗಿನ್ನೂ ಆತ್ಮಹತ್ಯೆಯನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಶೋಕಿಸಿದ ಅವರು ವಿನಯ್ ಸೋಮಯ್ಯ ಅವರ ಕುಟುಂಬದ ಜೊತೆ ನಾವಿದ್ದೇವೆ. ಅವರಿಗೆ ಎಲ್ಲ ಬಗೆಯ ನೆರವು ನೀಡಲಾಗುವುದು’ ಎಂದರು. ಬಿಜೆಪಿ ಐ.ಟಿ.ಸೆಲ್ನ ಕಾರ್ಯ ವೈಖರಿ ಕುರಿತು ತನಿಖೆಯಾಗಬೇಕು. ಈಚೆಗಷ್ಟೇ ಕಾಫಿ ಕುಡಿಯುತ್ತಿದ್ದ ರಾಹುಲ್ ಗಾಂಧಿ ಚಿತ್ರವನ್ನು ವಿಸ್ಕಿ ಕುಡಿಯುವಂತೆ ಬದಲಾಯಿಸಲಾಗಿತ್ತು ಎಂದು ಬಿಜೆಪಿ ಮುಖಂಡರೊಬ್ಬರು ನನ್ನ ಬಳಿ ಹೇಳಿದ್ದರು ಎಂದರು. ಮೊನ್ನೆ ಮಡಿಕೇರಿಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಕೆಲವರ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದ ಅವರು ಗೂಂಡಾಗಳು ಯಾವುದೇ ಪಕ್ಷದಲ್ಲಿದ್ದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದೂ ಗುಡುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.