ಮಡಿಕೇರಿ: ಇಲ್ಲಿನ ಗದ್ದುಗೆ ಹಾಗೂ ಇದಕ್ಕೆ ಸೇರಿರುವ ಜಾಗವನ್ನು ಸಂರಕ್ಷಣೆ ಮಾಡುವಂತೆ ಹೈಕೋರ್ಟ್ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರು ಆದೇಶಿಸಿದ್ದಾರೆ.
ಶನಿವಾರಸಂತೆಯ ಜೆ.ಎಸ್.ವಿರೂಪಾಕ್ಷಪ್ಪ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿ, ಗದ್ದುಗೆಗೆ ಸೇರಿದ ಜಾಗವನ್ನು ಅನೇಕ ಮಂದಿ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡು ಗದ್ದುಗೆಯ ಸ್ಮಾರಕದ ಅಂದ ಕೆಡಿಸಿದ್ದಾರೆ. ರಾಜರ ಕಾಲದ ಸ್ಮಾರಕ ಹಾಗೂ ಅಲ್ಲಿರುವ ಕಟ್ಟಡಗಳು ಶಿಥಿಲಮಟ್ಟಕ್ಕೆ ತಲುಪಿದೆ. ಇದನ್ನು ಸಂರಕ್ಷಿಸಲು ಸರ್ಕಾರ ವಿಫಲವಾಗಿದೆ ಎಂದು ದೂರಿದ್ದರು.
ಅರ್ಜಿದಾರರಾದ ವಿರೂಪಾಕ್ಷಪ್ಪ ಅವರ ಪರವಾಗಿ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದ ವಕೀಲ ಎನ್.ರವೀಂದ್ರನಾಥ್ ಕಾಮತ್ ಅವರು, ಈ ಹಿಂದೆ ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಮಡಿಕೇರಿ ಗದ್ದುಗೆ 1981ರಲ್ಲಿ ಇದನ್ನು ರಾಜ್ಯ ಸರ್ಕಾರ ಸುಪರ್ದಿಗೆ ವಹಿಸಲಾಯಿತು. ಅಲ್ಲಿಂದ ಇಲ್ಲಿಯನ ತನಕ ಸಂರಕ್ಷಣೆಯ ಕೆಲಸಗಳು ನಡೆದಿಲ್ಲ ಎಂದು ವಾದಿಸಿದ್ದರು.
ರಾಜರ ಗದ್ದುಗೆಗೆ ಸುಮಾರು 19 ಎಕರೆ 86 ಸೆಂಟುಗಳಷ್ಟು ಖಾಲಿ ಜಾಗ ಇದೆ. ಇದರಲ್ಲಿ ಬಹುಪಾಲು ಜಾಗವನ್ನು ಕೆಲವರು ಅತಿಕ್ರಮಿಸಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ತಹಶೀಲ್ದಾರ್ ಅವರಿಗೆ 12 ವರ್ಷಗಳ ಹಿಂದೆಯೇ ದೂರು ನೀಡಿದ್ದರೂ ತೆರವು ಕಾರ್ಯ ನಡೆದಿಲ್ಲ ಎಂದು ವಾದಿಸಿದರು.
ನ್ಯಾಯಮೂರ್ತಿ ಅವರು ಗದ್ದುಗೆಯ ಜಾಗವನ್ನು ಸರ್ವೆ ಮಾಡಿ ಅತಿಕ್ರಮಿಸಿರುವ ಜಾಗವನ್ನು ಗುರುತಿಸಬೇಕು. ನಂತರ, ಒತ್ತುವರಿ ತೆರವು ಮಾಡಿ ಗದ್ದುಗೆಯನ್ನು ಎಲ್ಲ ರೀತಿಯಿಂದಲೂ ಸ್ಮಾರಕವಾಗಿ ರಕ್ಷಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಆದೇಶಿಸಿದ್ದಾರೆ. ಬಳಿಕ ಕೈಗೊಂಡ ಕ್ರಮದ ಬಗ್ಗೆ ವಿವರವಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ. ಮುಂದಿನ ವಿಚಾರಣೆಯು ಏಪ್ರಿಲ್ 28ಕ್ಕೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.