
ವಿರಾಜಪೇಟೆ: ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಠಾಣೆಯ ಪೊಲೀಸರು ಬಂಧಿಸಿ, 10 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಕೇರಳ ರಾಜ್ಯದ ಇರ್ಕೂರು ತಳಿಪರಂಬದ ನಿವಾಸಿಗಳಾದ ಸಾಧಿಕ್ ಮತ್ತು ಅಬ್ದುಲ್ ಅಹಮ್ಮದ್ ಬಂಧಿತ ಆರೋಪಿಗಳು.
ಮೈಸೂರಿನ ಪಿರಿಯಾಪಟ್ಟಣದಿಂದ ಗೋವುಗಳನ್ನು ಕೇರಳಕ್ಕೆ ಸಾಗಿಸುವ ಮಾಹಿತಿ ಪಡೆದ ವಿರಾಜಪೇಟೆಯ ಗೋವು ರಕ್ಷಕರು ಪೊಲೀಸರ ಸಹಕಾರದಿಂದ ಸಮೀಪದ ಪೆರುಂಬಾಡಿಯಲ್ಲಿ ಶನಿವಾರ ಬೆಳಿಗ್ಗೆ 3ಕ್ಕೆ ಚೆಕ್ಪೋಸ್ಟ್ನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪತ್ತೆ ಹಚ್ಚಿದ್ದಾರೆ. ಲಾರಿಯೊಂದರಲ್ಲಿ ಅಲೂಗಡ್ಡೆ ಚೀಲಗಳ ಮರೆಯಲ್ಲಿ 10 ಗೋವುಗಳನ್ನು ಸಾಗಿಸುತ್ತಿದ್ದರು.
ಗೋವುಗಳು ಪತ್ತೆಯಾದ ಮಾಹಿತಿ ಪಡೆದ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಎಸ್.ಐ.ಪ್ರಮೋದ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಲಾರಿ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಕ್ಕೆ ಪಡೆದಿರುವ ಗೋವುಗಳನ್ನು ಮೈಸೂರಿನ ಗೋವು ಸಂರಕ್ಷಣಾ ಕೇಂದ್ರಕ್ಕೆ ರವಾನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಗೋವು ರಕ್ಷಕರಾದ ರಾಜೇಶ್, ಧನು, ವಿವೇಕ್ ರೈ ಹಾಗೂ ಕಿಶೋರ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.