ADVERTISEMENT

ಮಡಿಕೇರಿ | ಕಣ್ಣಿಗೆ ಹಬ್ಬ, ಕಿವಿಗೆ ಇಂಪು

ಮಡಿಕೇರಿಯಲ್ಲಿ ಮಂಗಳವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 4:56 IST
Last Updated 9 ಅಕ್ಟೋಬರ್ 2024, 4:56 IST
ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಕಲಾವಿದರ ವೈವಿಧ್ಯಮಯ ನೃತ್ಯ ಪ್ರದರ್ಶಿಸಿದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಕಲಾವಿದರ ವೈವಿಧ್ಯಮಯ ನೃತ್ಯ ಪ್ರದರ್ಶಿಸಿದರು   

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಮಡಿಕೇರಿ ದಸರೆ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಮಂಗಳವಾರ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಕಕ್ಕಬ್ಬೆಯ ಹೂಮಾಲೆ ಕುಡಿಯ ಸಾಂಸ್ಕೃತಿಕ ಸಮಿತಿಯ ಕಲಾವಿದರು ನೃತ್ಯ ಪ್ರದರ್ಶಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆರಂಭಿಸಿದರು.

ನೆಲ್ಲಕ್ಕಿ ಯುವತಿ ಮಂಡಳಿಯವರಿಂದ ಪಾರಂಪರಿಕ ಕಲೆ, ಗೌಡ ಮಹಿಳಾ ಒಕ್ಕೂಟ ಹಾಗೂ ಹಿಂದೂ ಮಲಯಾಳಿ ಸಂಘದ ಕಲಾವಿದರು ಪ್ರಸ್ತುತಪಡಿಸಿದ ಹಲವು ಬಗೆಯ ವೈವಿಧ್ಯಮಯ ನೃತ್ಯಗಳು ನೋಡಗರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿದವು.

ADVERTISEMENT

ಬಳಿಕ ಸ್ನೇಹ ನೀಲಪ್ಪ ಗೌಡ ಅವರ ನಿರೂಪಣೆಯಲ್ಲಿ ವಿವಿಧ ಕಲಾವಿದರು ಹಾಡಿದ ಹಾಡುಗಳು ಕಿವಿಗಿಂಪಾಗಿ ಕೇಳಿ ಬಂದವು.

ಬಾಲಕಲಾವಿದೆ ಜ್ಞಾನಾ ಗುರುರಾಜ್ ಅವರು ವಿಘ್ನೇಶ್ವರನ ಪ್ರಾರ್ಥನೆ ಮೂಲಕ ಸಂಗೀತ ರಸಸಂಜೆಗೆ ಮುನ್ನುಡಿ ಬರೆದರು, ಅಮೂಲ್ಯ ಮೈಸೂರು ಅವರು ‘ಕೇಳಿಸದೇ ಕಲ್ಲು ಕಲ್ಲುಗಳಲ್ಲಿ ಕನ್ನಡ...’ ಎಂಬ ಹಾಡಿನ ಮೂಲಕ ಕನ್ನಡಪ್ರೇಮವನ್ನು ಉಕ್ಕಿಸಿದರು. ರಮ್ಯಾ ಪ್ರಸನ್ನ ಅವರು ‘ನಿಂಬಿಯಾ ಬನಾದ ಮ್ಯಾಗಳ’ ಎಂಬ ಜನಪದ ಗೀತೆಯ ಮೂಲಕ ಕೇಳುಗರನ್ನು ಜಾನಪದ ಲೋಕಕ್ಕೆ ಕರೆದೋಯ್ದರು.

ಪೃಥ್ವಿ ಭಟ್‌ ಅವರು ಹಾಡಿದ ಸಿನಿಮಾ ಹಾಡುಗಳು ಭರಪೂರ ಮನರಂಜನೆ ಒದಗಿಸಿದವು. ‘ಟೀಂ ರೆವಿನ್ಯೂ’ ತಂಡದವರು ಹಾಗೂ ಶನಿವಾರಸಂತೆಯ ನಾಟ್ಯ ನಿಲಯ ನೃತ್ಯ ಸಂಸ್ಥೆಯ ಕಲಾವಿದರು ನೃತ್ಯವೂ ಭರಪೂರ ಮನರಂಜನೆ ಒದಗಿಸಿತು.

ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು, ‘ಐಶ್ವರ್ಯ ಮಹಿಳೆಯರು ಇದ್ದ ಕಡೆ ನಗು ಇರುತ್ತದೆ. ಬಹಳಷ್ಟು ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡುತ್ತಾರೆ’ ಎಂದು ಶ್ಲಾಘಿಸಿದರು.

ನಗರಸಭೆ ಸದಸ್ಯೆ ಅನಿತಾ ಪೂವಯ್ಯ ಅವರು ಮಾತನಾಡಿದರು.

ಗಮನಸೆಳೆದ ಹೂಮಾಲೆ ಕುಡಿಯ ಸಾಂಸ್ಕೃತಿಕ ಸಮಿತಿ ಕಲಾವಿದರ ನೃತ್ಯ ರಂಜಿಸಿದ ನೃತ್ಯ ಕಾರ್ಯಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.