ಮಡಿಕೇರಿ: ನಗರದ ಕಿಂಗ್ಸ್ ಅಫ್ ಕೂರ್ಗ್ ಡಾನ್ಸ್ ಇನ್ಸ್ಟಿಟ್ಯೂಟ್ನ 2ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ‘ನೃತ್ಯ ವೈಭವ–2020’ ಪ್ರೇಕ್ಷಕರ ಮನಸೂರೆಗೊಳಿಸಿತು.
ಇಲ್ಲಿನ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಕಲಾವಿದರು ಹಾಗೂ ಕಲಾ ತಂಡಗಳು ಭಾಗವಹಿಸಿದ್ದವು.
ಪುಟಾಣಿಗಳಿಂದ ಹಿಡಿದು ಯುವಕ– ಯುವತಿಯರು ನೃತ್ಯ ಪ್ರದರ್ಶನ ನೀಡಿದರು. ಧಾರ್ಮಿಕ, ಪೌರಾಣಿಕ, ಜಾನಪದ ಶೈಲಿಯ, ಪಾಶ್ಚಿಮಾತ್ಯ ಶೈಲಿಯ ನೃತ್ಯ ಪ್ರಕಾರಗಳು ಗಮನ ಸೆಳೆದವು.
ವಿವಿಧ ವಿಭಾಗಗಳಲ್ಲಿ ಪ್ರದರ್ಶನದಲ್ಲಿ ಒಂದಕ್ಕಿಂತ ಮತ್ತೊಂದು ನೃತ್ಯಗಳು ಮೂಡಿಬಂದವು. ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆಯ ಕಲಾವಿದರು ಪ್ರದರ್ಶನ ನೃತ್ಯ ಮಾಡಿದರು. ಇದರೊಂದಿಗೆ ಜ್ಹೀ ವಾಹಿನಿ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಶಶಿ ಮಾಸ್ಟರ್ ತಂಡದ ಅನ್ವಿಶಾ ಮತ್ತು ಪ್ರೇಕ್ಷಿತ್ ಪುಟಾಣಿ ಜೋಡಿ ಪ್ರದರ್ಶನ ನೃತ್ಯ ಮಾಡಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಕಿಂಗ್ಸ್ ಆಫ್ ಕೂರ್ಗ್ನ ಕಲಾವಿದರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಟ್ರೋಫಿ ವಿತರಣೆ ಮಾಡಲಾಯಿತು.
ನೃತ್ಯ ಪ್ರದರ್ಶನವನ್ನು ನೃತ್ಯ ಸಂಯೋಜಕ ಶಶಿ ಮಾಸ್ಟರ್ ಉದ್ಘಾಟಿಸಿದರು. ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಬೆಂಗಳೂರಿನ ಉದ್ಯಮಿ ಜಯಂತಿ ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪತ್ರಕರ್ತ ಜಿ. ರಾಜೇಂದ್ರ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ.ಗಣೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀಟಾ ಮುತ್ತಣ್ಣ, ಉದ್ಯಮಿಗಳಾದ ಸವಿತಾ ಅರುಣ್, ಅನ್ಸಫ್, ಈಶ್ವರ್ ಕುಮಾರ್, ಜಿಲ್ಲಾ ನೃತ್ಯ ಸಂಯೋಜಕ ಸಂಘದ ಅಧ್ಯಕ್ಷ ಚೇತನ್, ನೃತ್ಯ ಸಂಯೋಜಕ ವಿನೋದ್ ಕರ್ಕೆರಾ ಹಾಗೂ ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆ ಅಧ್ಯಕ್ಷ ಮಹೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.