ನಾಪೋಕ್ಲು: ‘ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಕೊಳಕೇರಿ ಗ್ರಾಮದ ಬೆಳೆಗಾರರಾದ ಕೇಟೋಳಿರ ರೆಮ್ಮಿ, ನೆಡುಮಂಡ ಕೃತಿ, ಮುದ್ದಪ್ಪ ಬೇತು ಗ್ರಾಮದ ಅಪ್ಪನೆರವಂಡ ಕಿರಣ್ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಮುದ್ರಾ ಯೋಜನೆಯಡಿಯಲ್ಲಿ ಶೇ 13 ಬಡ್ಡಿ ದರದಲ್ಲಿ ₹ 1 ಲಕ್ಷನ್ನು ನಾವು ಸಾಲವಾಗಿ ಪಡೆದಿದ್ದು ನಾಲ್ಕು ವರ್ಷಗಳಿಂದ ವಾರ್ಷಿಕ ಬಡ್ಡಿಯನ್ನು ಪಾವತಿಸಿ ಸಾಲವನ್ನು ನವೀಕರಿಸ ಲಾಗಿದೆ. ಆದರೆ, ಈ ವರ್ಷ ಬಡ್ಡಿ ಪಾವತಿಸಿ ಸಾಲ ಮರುಪಾವತಿಸಲು ನಾಪೋಕ್ಲು ಡಿಸಿಸಿ ಬ್ಯಾಂಕಿಗೆ ತೆರಳಿದ ಸಂದರ್ಭ ಬಡ್ಡಿ ಮಾತ್ರ ಪಾವತಿಸಿದರೆ ಸಾಲದು ಅಸಲಿನಲ್ಲಿ ₹ 20 ಸಾವಿರ ಪಾವತಿಸಬೇಕೆಂದು ಬ್ಯಾಂಕ್ ಅಧ್ಯಕ್ಷರು ಆದೇಶಿಸಿದ್ದಾರೆ ಎಂದು ವ್ಯವಸ್ಥಾಪಕರು ಹೇಳುತ್ತಿದ್ದಾರೆ’ ಎಂ ದರು.
ಈ ಷರತ್ತುಗಳು ಸಾಲ ಪಡೆಯುವ ಸಂದರ್ಭದಲ್ಲಿ ಇರಲಿಲ್ಲ. ಈಗ ಏಕಾಏಕಿ ಗ್ರಾಹಕರ ಮೇಲೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹೊಸ ಕಾನೂನು ಹೇರುತ್ತಿರುವುದು ಸರಿಯಲ್ಲ ಎಂದರು.
‘ಕೊರೊನಾ ಕಾರಣದಿಂದ ರೈತಾಪಿ ವರ್ಗ, ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಹಕರಿಗೆ ಅನುಕೂಲವಾಗುವಂತೆ ಬಡ್ಡಿ ಮಾತ್ರ ಪಾವತಿಸಿ ಸಾಲ ನವೀಕರಣ ಮಾಡುವಂತೆ ಅನುಕೂಲ ಮಾಡಿಕೊಡಬೇಕು’ ಎಂದು ಅವರು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.