ADVERTISEMENT

ಚಿಕಿತ್ಸೆ ವಿಳಂಬ ಆರೋಪ: ವೈದ್ಯರ ಮೇಲೆ ಹಲ್ಲೆ

ತಿತಿಮತಿ ಗ್ರಾಮದ ಮೂವರು ಯುವಕರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:33 IST
Last Updated 4 ಮೇ 2021, 5:33 IST
ಜಿ.ಎಂ.ಹೊಸಮನಿ
ಜಿ.ಎಂ.ಹೊಸಮನಿ   

ಗೋಣಿಕೊಪ್ಪಲು: ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದಾರೆ ಎಂಬ ಕಾರಣಕ್ಕೆ, ಸಮೀಪದ ತಿತಿಮತಿ ಆರೋಗ್ಯ ಕೇಂದ್ರದ ವೈದ್ಯರ ಮೇಲೆ ಮೂವರು ಯುವಕರು ಸೋಮವಾರ ಹಲ್ಲೆ ಮಾಡಿದ್ದಾರೆ.

ಡಾ. ಜಿ.ಎಂ. ಹೊಸಮನಿ (70) ಹಲ್ಲೆಗೊಳಗಾದ ವೈದ್ಯ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್ ಈ ಆಸ್ಪತ್ರೆಯನ್ನು ದತ್ತು ತೆಗೆದುಕೊಂಡಿದ್ದು, ಅಲ್ಲಿ ಇವರು ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕೈ ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ಗೋಣಿ ಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳಾದ ಶಮೀರ್, ಸೈಯದ್ ಅಲಿ ಹಾಗೂ ಫೈರೋಜ್ ಎಂಬವವರನ್ನು ಗೋಣಿಕೊಪ್ಪಲು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

‘ಆರೋಪಿಗಳು ತಮ್ಮ ಸಂಬಂಧಿ ಶಾಹಿರಾಬಾನು ಅವರನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ವೈದ್ಯರು ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ, ಆಕೆಯ ಸಹೋದರ ಶಮೀರ್ ವೈದ್ಯರೊಂದಿಗೆ ಜಗಳವಾಡಿದ್ದಾನೆ. ಈ ಸಂದರ್ಭದಲ್ಲಿ ಯುವಕರೆಲ್ಲ ಸೇರಿ, ವೈದ್ಯರು ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಬಳಿಕ, ಸಂಯಮ ಕಳೆದುಕೊಂಡು ವೈದ್ಯರನ್ನು ಥಳಿಸಿದ್ದಾರೆ. ನಿಯಂತ್ರಣ ತಪ್ಪಿ, ಚರಂಡಿಗೆ ಬಿದ್ದ ಪರಿಣಾಮ ವೈದ್ಯರ ಕೈಗೆ ಬಲವಾದ ಪೆಟ್ಟು ಬಿದ್ದಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.