ಶನಿವಾರಸಂತೆ: ಇಲ್ಲಿನ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಯೂರು ಗ್ರಾಮದ ಸಾರ್ವಜನಿಕರು ಕೊಟೆಯೂರು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆಗೆದು ಶ್ರಮದಾನ ಮಾಡಿದರು.
ಗ್ರಾಮಕ್ಕೆ ಸಂಪರ್ಕಿಸುವ ವಿದ್ಯುತ್ ತಂತಿಗೆ ತಾಗಿದ್ದ ಮರದ ರಂಬೆ ಕೊಂಬೆಗಳನ್ನು ಕಡಿದರು. ಸೋಮವಾರಪೇಟೆ– ಶನಿವಾರಸಂತೆ ಮುಖ್ಯರಸ್ತೆ ಮಳೆಗಾಲದಲ್ಲಿ ರಸ್ತೆಗೆ ಮರ ಬಿದ್ದ ಸಂದರ್ಭದಲ್ಲಿ ಬದಲಿ ರಸ್ತೆಯಾಗಿ ಕೋಟೆಯೂರಿನವರು ಹಣತೆ ಮಾರ್ಗವಾಗಿ ಶನಿವಾರಸಂತೆ ತಲಪುವ ಪರ್ಯಾಯ ರಸ್ತೆ ಇದಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಕಳೆ ಗಿಡಗಳಿಂದ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿತ್ತು. ರಸ್ತೆಯ ಕೆಲವು ಕಡೆಯಲ್ಲಿ ಗುಂಡಿಮಯವಾಗಿದ್ದು ಆ ಗುಂಡಿಗೆ ಮಣ್ಣು ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಬಸವನಕೊಪ್ಪ ಸೇತುವೆ ತಡೆಗೋಡೆಯಲ್ಲಿ ಸಂಪೂರ್ಣವಾಗಿ ಗಿಡಗಂಟಿಗಳು ಬೆಳೆದಿದ್ದವು. ಸೇತುವೆ ಸಮೀಪ ತಿರುವು ರಸ್ತೆ ಇದ್ದಿದ್ದರಿಂದ ಸಂಚಾರ ಮಾಡುವ ವಾಹನಗಳ ಚಾಲಕರಿಗೆ ಎದುರು ಬರುವ ವಾಹನಗಳಿಗೆ ಕಾಣದಂತೆ ವ್ಯಾಪಿಸಿದ್ದವು. ಗ್ರಾಮಸ್ಥರು ಸೇರಿ ಕಳೆ ಗಿಡಗಳನ್ನು ಕಡಿದು ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಿದ್ದಾರೆ.
ಈ ವೇಳೆ ಕೋಟೆಯೂರು ಗ್ರಾಮದ ಮುಖಂಡರಾದ ಸುರೇಶ್, ಉದಯ, ಭರತ್, ನಿತಿನ್, ಲೋಕೇಶ್, ನವೀನ್ ಅಜಳ್ಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.