ಸುಂಟಿಕೊಪ್ಪ: ಇಲ್ಲಿನ ಗದ್ದೆಹಳ್ಳದ ಕೊಡಂಗಲ್ಲೂರು ಭದ್ರಕಾಳಿ ಕುರುಂಬ, ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
ಶನಿವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ವೈದಿಕ ಕೈಂಕರ್ಯಗಳಿಗೆ ಚಾಲನೆ ದೊರೆಯಿತು. ಸಂಜೆ ಗಣಪತಿ ಪೂಜೆ, ಸುಬ್ರಹ್ಮಣ್ಯ ದೇವರ ಪೂಜೆ, ಮುತ್ತಪ್ಪ ದೇವರಿಗೆ ಪೈಂಗುತ್ತಿ, ರಾತ್ರಿ ಚಾಮುಂಡೇಶ್ವರಿ ಪೂಜೆ, ಗುಳಿಗನ ಪೂಜೆ, ಭದ್ರಕಾಳಿ ದೇವಿಗೆ ಅರ್ಚನೆ ನಡೆಯಿತು.
ಅನಂತರ ದೇವಿ ಕಾರಣಿಕ ದರ್ಶನ ಭಕ್ತರಿಗೆ ದೊರೆಯಿತು. ರಾತ್ರಿ, ವಸೂರಿಮಲೆ ತಲಪುರಿ ಸ್ನಾನ, ಮೆರವಣಿಗೆ ಆಕರ್ಷಣೀಯವಾಗಿ ಮೂಡಿಬಂತು. ದಾರಿಯುದ್ದಕ್ಕೂ ಭಕ್ತರ ಉದ್ಘೋಷದೊಂದಿಗೆ ಕೇರಳದ ಚಂಡೆ ವಾದ್ಯ, ಹಣತೆ ಹಿಡಿದು ಮಹಿಳೆಯರು ಮಕ್ಕಳು ಮೆರವಣಿಗೆ ಮೂಲಕ ಸಾಗಿ ನಂತರ ದೇವಾಲಯಕ್ಕೆ ತಲುಪಿತು.
9.30ರಿಂದ ದೇವಿಯ ದರ್ಶನ ದೊರೆಯಿತು. ನಂತರ ಭಕ್ತರು ದೇವಿಯಲ್ಲಿ ತಮ್ಮ ಬೇಡಿಕೆ ಮತ್ತು ಹರಕೆ ಸಲ್ಲಿಸಿದರು.
ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಸುಂಟಿಕೊಪ್ಪ, ಗದ್ದೆಹಳ್ಳ, ಬಾಳೆಕಾಡು, ಕೆದಕಲ್, ಕಂಬಿಬಾಣೆ, ಮಾದಾಪುರ ಸೇರಿ ಕೇರಳ ರಾಜ್ಯದ ಭಕ್ತರು ಆಗಮಿಸಿದ್ದರು. ದೇವಾಲಯದ ಮುಖ್ಯಸ್ಥರಾದ ಪಿ.ಆರ್.ಸುಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.