ಮಡಿಕೇರಿ: ‘ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದರೆ; ಮಕ್ಕಳು ಕೂಡ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ’ ಎಂದು ಕೂಡಿಗೆ ಸೈನಿಕ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ಇಲ್ಲಿ ಅಭಿಪ್ರಾಯಪಟ್ಟರು.
ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಐವರು ಶಿಕ್ಷಕರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ ಮಾಡಿದ ಅವರು ಮಾತನಾಡಿದರು.
‘ಸಾಮಾಜಿಕ ಕಳಕಳಿಯೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯು ಅಪಾರವಾದ ಕೊಡುಗೆ ನೀಡುತ್ತಿದೆ. ದೇಶದ ಪ್ರಗತಿಯಲ್ಲಿ ಭವಿಷ್ಯದ ಪ್ರಜೆಗಳ ಶಿಕ್ಷಣ ಮಹತ್ವದ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಶಿಕ್ಷಕರಿಂದ ಮಾತ್ರ ಸಾಧ್ಯ’ ಎಂದು ಅವರು ಹೇಳಿದರು.
‘ವಿದ್ಯಾರ್ಥಿಗಳಲ್ಲಿನ ಸಾಮರ್ಥ್ಯ, ಅಭಿರುಚಿ ಗುರುತಿಸುವಶಿಕ್ಷಕರು ಅವರನ್ನು ಮುಖ್ಯವಾಹಿನಿಗೆ ಕರೆ ತರುತ್ತಾರೆ. ಏನೂ ಅರಿಯದ ಮುಗ್ಧ ಮಕ್ಕಳನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಸರಿಸಾಟಿಯಿಲ್ಲದ್ದು’ ಎಂದರು.
‘ಶಿಕ್ಷಕರ ಬಗ್ಗೆ ಮಕ್ಕಳಲ್ಲಿ ಹಿಂದೆ ಇದ್ದ ಗೌರವ ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಗುರುಭ್ಯೋ ನಮಃ ಎಂಬ ಕಾಲದಿಂದ ಗುರುವೇನು ಮಹಾ? ಎಂಬ ಕಾಲ ಈಗ ಬಂದಿದೆ’ ಎಂದು ಅವರು ವಿಷಾದಿಸಿದರು.
ರೋಟರಿ ಉಪ ರಾಜ್ಯಪಾಲ ಎಚ್.ಟಿ.ಅನಿಲ್ ಮಾತನಾಡಿ ‘ಶಿಕ್ಷಕರು ಹಣತೆ ಇದ್ದಂತೆ. ಹಣತೆಯೊಂದು ನೂರಾರು ದೀಪ ಬೆಳಗಿಸುವಂತೆ ಶಿಕ್ಷಕರ ಪ್ರತಿಭೆ ನೂರಾರು ವಿದ್ಯಾರ್ಥಿಗಳ ಪ್ರತಿಭೆ ಬೆಳಗಿಸಲು ಕಾರಣವಾಗುತ್ತದೆ. ರೋಟರಿ ಸಂಸ್ಥೆಯು ಸಮಾಜದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಸೆಪ್ಟೆಂಬರ್ನಲ್ಲಿ ಗೌರವಿಸುತ್ತದೆ’ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ‘ಮಿಸ್ಟಿ ಹಿಲ್ಸ್ ನಗರ ಮತ್ತು ಗ್ರಾಮೀಣ ಭಾಗದ ಶಿಕ್ಷಕರನ್ನು ಗುರುತಿಸಿ ಪ್ರತಿಷ್ಠಿತ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಶಿಕ್ಷಣಕ್ಕೆ ಸದಾ ಆದ್ಯತೆ ನೀಡುತ್ತಿರುವ ರೋಟರಿಯು ಈ ತಿಂಗಳಿನಲ್ಲಿ ಸರ್ಕಾರಿ ಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಲ್ಲ ವಿದ್ಯಾ ಸೇತು ಹೆಸರಿನ ಮಾರ್ಗದರ್ಶಿ ಪುಸ್ತಕ ವಿತರಿಸುತ್ತಿದೆ’ ಎಂದು ಹೇಳಿದರು.
ವಲಯ ಸೇನಾನಿ ಜಗದೀಶ್ ಪ್ರಶಾಂತ್, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್.ರಾಜೇಶ್, ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಕೆ.ಡಿ.ದಯಾನಂದ್, ಪ್ರಮೋದ್ ಕುಮಾರ್ ರೈ, ಡಾ.ಕುಶ್ವಂತ್ ಕೋಳಿಬೈಲು, ರಶ್ಮಿ ದೀಪಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.