ಶನಿವಾರಸಂತೆ: ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಕಸ ವಿಲೇವಾರಿ ಘಟಕಕ್ಕೆ ತಡೆಗೋಡೆ ನಿರ್ಮಿಸಲು ಜಾಗವನ್ನು ಗುರುವಾರ ಶನಿವಾರಸಂತೆ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಗುರುತು ಮಾಡಿದರು.
ಈ ವೇಳೆ ಮಾತನಾಡಿದ ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಬ್ರಮಣಿ, ‘ನಮ್ಮ ಗ್ರಾಮದಲ್ಲಿ ಶನಿವಾರಸಂತೆ ಪಟ್ಟಣದಿಂದ ಬರುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ತಡೆಗೋಡೆ ನಿರ್ಮಿಸಿ, ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆಯಾಗದ ರೀತಿ ನೋಡಿಕೊಳ್ಳಬೇಕು. ವಿದ್ಯುತ್ ಹಾಗೂ ನೀರಿನ ಸಂಪರ್ಕ ನೀಡಬೇಕು’ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಆದಿತ್ಯಗೌಡ, ‘ಇಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತದೆ. ಹಾಲಿ ಇರುವ ಕಸ ವಿಲೇವಾರಿ ಘಟಕದ ಸಮೀಪ ಶಾಲಾ-ಕಾಲೇಜು, ಆಸ್ಪತ್ರೆ, ನದಿ ಇರುವುದರಿಂದ ವಿಲೇವಾರಿಗೆ ಕಷ್ಟವಾಗಿದೆ. ಹಾಗಾಗಿ, ದುಂಡಳ್ಳಿ ಗ್ರಾಮಸ್ಥರ ಸಹಕಾರ ಅಗತ್ಯ ಇದೆ’ ಎಂದು ಹೇಳಿದರು.
ನಂತರ, ಅಧಿಕಾರಿಗಳು ಘಟಕಕ್ಕೆ ತಡೆಗೋಡೆ ನಿರ್ಮಿಸಲು ಜಾಗವನ್ನು ಗುರುತುಪಡಿಸಿದರು. ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ, ಕಾರ್ಯದರ್ಶಿ ದೇವರಾಜ್, ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಜಾನಕಿ, ಮುಖಂಡರಾದ ಕೆ.ಟಿ.ಹರೀಶ್, ಶನಿವಾರಸಂತೆ ಕಂದಾಯ ಪರೀವಿಕ್ಷಕ ಮಂಜುನಾಥ, ಗ್ರಾಮ ಆಡಳಿತ ಅಧಿಕಾರಿ ಸಂತೋಷ, ಭೂ ಮಾಪನ ಇಲಾಖೆ ಅಧಿಕಾರಿ ರಘುನಾಥ್ ಬಾಬ್ಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.