ಶನಿವಾರಸಂತೆ: ‘ಜಾತ್ರಾ ಮಹೋತ್ಸವ ಗ್ರಾಮೀಣ ಪ್ರದೇಶದ ಸಂಸ್ಕೃತಿಯ ಸೊಗಡಾಗಿದ್ದು ಸಂಸ್ಕೃತಿ, ಸಂಪ್ರದಾಯ, ಕಲೆಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಬಿ.ಅಭಿಮನ್ಯುಕುಮಾರ್ ಅಭಿಪ್ರಾಯಪಟ್ಟರು.
ಸಮೀಪದ ಗುಡುಗಳಲೆ ಜಯದೇವ ಜಾನುವಾರು ಜಾತ್ರಾ ಮಹೋತ್ಸವದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಗತವೈಭವ ಇಂದಿಲ್ಲ. ರಾಸುಗಳ ಸಂಖ್ಯೆ ಕುಸಿದಿದ್ದರೂ ಜಾತ್ರೆ ಜನಾಕರ್ಷಣೆಯ ಕೇಂದ್ರವಾಗಿ ಉಳಿದಿದೆ. ದೇಸಿ ತಳಿಗಳು ಪವಿತ್ರವೆನಿಸಿದ್ದರೂ ಪಶುಪಾಲನೆ ಕಡಿಮೆಯಾಗಿದೆ. ಸಂಸ್ಕೃತಿಯ ಪ್ರತೀಕವಾದ ಜಾತ್ರಾ ಪರಂಪರೆಯನ್ನು ಯುವಜನಾಂಗ ಉಳಿಸಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜ್ ಮಾತನಾಡಿ, ‘ಗುಡುಗಳಲೆ ಜಯದೇವ ಜಾನುವಾರು ಜಾತ್ರೆ ಜಿಲ್ಲೆಯಲ್ಲೇ ದೊಡ್ಡದು. ಈ ಪರಂಪರೆ ಮುಂದುವರಿಯಬೇಕು. ವಸ್ತುಪ್ರದರ್ಶನ ಹಳೆಯ ಕಟ್ಟಡ ಕುಸಿಯುವ ಹಂತ ತಲುಪಿದ್ದು ಅದನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ಶ್ರಮಿಸುವುದಾಗಿ’ ಭರವಸೆ ನೀಡಿದರು.
ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಮಾಜಿ ಸದಸ್ಯ ಡಿ.ಬಿ.ಧರ್ಮಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಕುಶಾಲಪ್ಪ, ಬಿ.ಎಸ್.ಅನಂತಕುಮಾರ್ ಮಾತನಾಡಿದರು.
ಜಾತ್ರೆಯಲ್ಲಿ ಪ್ರದರ್ಶನ ಹಾಗೂ ಉತ್ತಮ ರಾಸುಗಳ ಸ್ಪರ್ಧೆಗೆ ಬಂದಿದ್ದ ರಾಸುಗಳಿಗೆ ಹಾಗೂ ವಸ್ತುಪ್ರದರ್ಶನದಲ್ಲಿ ಮೊದಲ ಮೂರು ಸ್ಥಾನ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಸಮಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು.ಕಾರ್ಯದರ್ಶಿ ಸುಮಂತ್, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್, ಉಪಾಧ್ಯಕ್ಷೆ ರೂಪಾ, ಸದಸ್ಯರು, ಪಿಡಿಒ ಸ್ಮಿತಾ, ಶಿಕ್ಷಕ ಗುರುಬಸಪ್ಪ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.