ADVERTISEMENT

ಮೂರ್ನಾಡು ಕೊಡವ ಸಮಾಜಕ್ಕೆ ಪ್ರಶಸ್ತಿ

ಬಾಳುಗೋಡಿನಲ್ಲಿ ನಡೆದ ‘ಕೊಡವ ನಮ್ಮೆ’ ಹಾಕಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 7:44 IST
Last Updated 21 ನವೆಂಬರ್ 2022, 7:44 IST
ವಿರಾಜಪೇಟೆ ಸಮೀಪದ ಬಾಳುಗೋಡಿನಲ್ಲಿ ಕೊಡವ ಸಮಾಜಗಳ ಒಕ್ಕೂಟದಿಂದ ‘ಕೊಡವ ನಮ್ಮೆ’ ಭಾನುವಾರ ನಡೆಯಿತು (ಎಡ ಚಿತ್ರ). ‘ಕೊಡವ ನಮ್ಮೆ'ಯಲ್ಲಿ ನೃತ್ಯ ಸ್ಪರ್ಧೆ ನಡೆಯಿತು
ವಿರಾಜಪೇಟೆ ಸಮೀಪದ ಬಾಳುಗೋಡಿನಲ್ಲಿ ಕೊಡವ ಸಮಾಜಗಳ ಒಕ್ಕೂಟದಿಂದ ‘ಕೊಡವ ನಮ್ಮೆ’ ಭಾನುವಾರ ನಡೆಯಿತು (ಎಡ ಚಿತ್ರ). ‘ಕೊಡವ ನಮ್ಮೆ'ಯಲ್ಲಿ ನೃತ್ಯ ಸ್ಪರ್ಧೆ ನಡೆಯಿತು   

ವಿರಾಜಪೇಟೆ: ಸಮೀಪದ ಬಾಳುಗೋಡಿನಲ್ಲಿ ಕೊಡವ ಸಮಾಜಗಳ ಒಕ್ಕೂಟದಿಂದ ‘ಕೊಡವ ನಮ್ಮೆ’ಯ ಅಂಗವಾಗಿ ನಡೆದ ಹಾಕಿ ಟೂರ್ನಿಯಲ್ಲಿ ಮೂರ್ನಾಡು ಕೊಡವ ಸಮಾಜ ಪ್ರಶಸ್ತಿ ಗಳಿಸಿದರೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬಾಳುಗೋಡುವಿನ ಮೈದಾನದಲ್ಲಿ ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಮೂರ್ನಾಡು ಕೊಡವ ಸಮಾಜವು 1-0 ಗೋಲಿನಿಂದ ಮಡಿಕೇರಿ ಕೊಡವ ಸಮಾಜ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದುಕೊಂಡಿತು.

ವಿಜೇತ ತಂಡಕ್ಕೆ ₹30 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಸ್ಥಾನ ಪಡೆದ ತಂಡ ₹20 ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.

ADVERTISEMENT

‘ಕೊಡವ ನಮ್ಮೆ’ಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಂಗಳೂರು ಕೊಡವ ಸಮಾಜ 9 ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ಮೈಸೂರು ಕೊಡವ ಸಮಾಜ 6 ಸ್ಪರ್ಧೆಗಳಲ್ಲಿ ಗೆಲುವು ದಾಖಲಿಸಿ ದ್ವಿತೀಯ ಸ್ಥಾನ ಪಡೆದರೆ, ಮಡಿಕೇರಿ, ನಾಪೋಕ್ಲು ಮತ್ತು ಪೊನ್ನಂಪೇಟೆ ಕೊಡವ ಸಮಾಜಗಳು ತಲಾ ಎರಡು ಸ್ಪರ್ಧೆಗಳಲ್ಲಿ ಗೆಲುವು ದಾಖಲಿಸಿ ತೃತೀಯ ಸ್ಥಾನ ಗಳಿಸಿದವು.

ಹಗ್ಗಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ಅಮ್ಮತ್ತಿ ಕೊಡವ ಸಮಾಜದ ವಿರುದ್ಧ ನಾಪೋಕ್ಲು ಕೊಡವ ಸಮಾಜ ಹಾಗೂ ಮಹಿಳೆಯರ ವಿಭಾಗದಲ್ಲಿ ಮಡಿಕೇರಿ ಕೊಡವ ಸಮಾಜದ ವಿರುದ್ಧ ನಾಪೋಕ್ಲು ಕೊಡವ ಸಮಾಜ ಗೆಲುವು ದಾಖಲಿಸಿತು.

ಸಮಾರೋಪ ಸಮಾರಂಭ: ವಿಧಾನ ಪರಿಷತ್‌ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಮಾತನಾಡಿ, ‘ಕೊಡವರು ಒಗ್ಗಟ್ಟು ಕಾಯ್ದುಕೊಳ್ಳುವ ಮೂಲಕ ಕೊಡವ ಆಚಾರ-ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪಣ ತೊಡಬೇಕು’ ಎಂದರು.

ಮುಖಂಡ ಮೇರಿಯಂಡ ಸಿ.ನಾಣಯ್ಯ ಮಾತನಾಡಿ, ‘ಸರ್ಕಾರ ನೀಡಿರುವ ₹10 ಕೋಟಿ ಅನುದಾನದಲ್ಲಿ ₹6 ಕೋಟಿ ಬಾಳುಗೋಡು ಕೊಡವ ಸಮಾಜ, 31 ಕೊಡವ ಸಮಾಜಗಳಿಗೆ₹3 ಕೋಟಿ ಮತ್ತು ₹1 ಕೋಟಿ ಭಾಗಮಂಡಲದಲ್ಲಿನ ಕೊಡವ ಸಮುದಾಯ ಭವನಕ್ಕೆ ಹಂಚಿಕೆಯಾಗಲಿದೆ’ ಎಂದು ಹೇಳಿದರು.

ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿದರು.

ಶಾಸಕ ಕೆ.ಜಿ.ಬೋಪಯ್ಯ, ವಿಧಾನಪರಿಷತ್ತಿನ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಲ್ಲೇಂಗಡ ದಾದಾ ಬೆಳ್ಯಪ್ಪ, ಕ್ರೀಡಾ ಸಮಿತಿಯ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಆಹಾರ ಸಮಿತಿಯ ಅಧ್ಯಕ್ಷ ಕುಂಬೇರನ ಮನು ಕುಮಾರ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಒಕ್ಕೂಟದ ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಉಪಾಧ್ಯಕ್ಷರಾದ ಮಾಳೇಟಿರ ಅಭಿಮನ್ಯು ಕುಮಾರ್, ಕರವಟ್ಟಿರ ಪೆಮ್ಮಯ್ಯ ಹಾಗೂ ಮಲಚಿರ ಬೋಸ್ ಚಿಟ್ಟಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.