ADVERTISEMENT

ಮುಗಿಲುಮುಟ್ಟಿದ ‘ಪೊಲಿ ಪೊಲಿಯೇ ದೇವ’ ಉದ್ಘೋಷ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 15:34 IST
Last Updated 28 ನವೆಂಬರ್ 2023, 15:34 IST
ಸುಂಟಿಕೊಪ್ಪ ಸಮೀಪದ ಉಲುಗುಲಿ ಗ್ರಾಮದ ಪನ್ಯದಲ್ಲಿರುವ ಬೆಳ್ಳಾರಿಕಮ್ಮ ದೇವಾಲಯದ ಗದ್ದೆಯಲ್ಲಿ ಕದಿರು ತೆಗೆದು ಹುತ್ತರಿ ಹಬ್ಬವನ್ನು ಆಚರಿಸಲಾಯಿತು
ಸುಂಟಿಕೊಪ್ಪ ಸಮೀಪದ ಉಲುಗುಲಿ ಗ್ರಾಮದ ಪನ್ಯದಲ್ಲಿರುವ ಬೆಳ್ಳಾರಿಕಮ್ಮ ದೇವಾಲಯದ ಗದ್ದೆಯಲ್ಲಿ ಕದಿರು ತೆಗೆದು ಹುತ್ತರಿ ಹಬ್ಬವನ್ನು ಆಚರಿಸಲಾಯಿತು   

ಸುಂಟಿಕೊಪ್ಪ: ಸುಗ್ಗಿ ಹಬ್ಬ ಹುತ್ತರಿಯ ಸಂಭ್ರಮ ಸುಂಟಿಕೊಪ್ಪದಲ್ಲಿ ಸೋಮವಾರ ರಾತ್ರಿ ಗರಿಗೆದರಿತು. ನೆರೆ ಕಟ್ಟುವುದು, ಕದಿರು ತೆಗೆಯುವುದು ಸೇರಿದಂತೆ ವಿವಿಧ ದಾರ್ಮಿಕ ಆಚರಣೆಗಳಿಗೆ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮುನ್ನುಡಿ ಬರೆಯುತ್ತಿದ್ದಂತೆ, ಸುಂಟಿಕೊಪ್ಪ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಸಡಗರ ಸಂಭ್ರಮ ಮೊಳೈಸಿತು‌.

ಶೀತಗಾಳಿಯ ನಡುವೆ ಪೊಲಿ ಪೊಲಿಯೇ ದೇವ ಎಂದು ಉದ್ಘೋಷ ಮುಗಿಲು ಮುಟ್ಟಿತು. ಪಟಾಕಿಯ ಸದ್ದಿಲ್ಲದೇ ಕೇವಲ ಹಸಿರು ಪಟಾಕಿಯೊಂದಿಗೆ ಬಾನಂಗಳದಲ್ಲಿ ಬಣ್ಣಬಣ್ಣದ ಚಿತ್ತಾರ ದೊಂದಿಗೆ ಬಂದೂಕಿನಿಂದ ಹೊರಹೊಮ್ಮಿದ ಕುಶಾಲ ತೋಪುಗಳು ಹುತ್ತರಿ ಹಬ್ಬಕ್ಕೆ ಇನ್ನಷ್ಟು ಪುಷ್ಟಿ ನೀಡಿತು.

ಸಮೀಪದ ಉಲುಗಲಿ ಗ್ರಾಮಕ್ಕೆ ಸೇರಿದ ಪನ್ಯದ ಮಳೂರು ಬಳ್ಳಾರಿ ಕಮ್ಮ ದೇವಾಲಯದಲ್ಲಿ ದೇವರ ಗದ್ದೆಯಲ್ಲಿ ಬೆಳೆದು ನಿಂತಿದ್ದ ಬತ್ತದ ಪೈರಿಗೆ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿಸಿ ಹಿರಿಯರಾದ ಮಿಟ್ಟು ಅವರ ನೇತೃತ್ವದಲ್ಲಿ ಕದಿರು ತೆಗೆಯುವುದರ ಮೂಲಕ ಹಬ್ಬವನ್ನು ಆಚರಿಸಲಾಯಿತು. ನಂತರ ದೇವಾಲಯಕ್ಕೆ ತೆರಳಿ, ಪೊಲಿಯೇ ದೇವ ಎನ್ನುತ್ತಾ ಪ್ರದಕ್ಷಿಣೆ ಪ್ರದಕ್ಷಿಣೆ ನಡೆಸಿ ಹುತ್ತರಿ ಹಬ್ಬಕ್ಕೆ ಮುನ್ನುಡಿ ನೀಡಲಾಯಿತು.

ADVERTISEMENT

ಸುಂಟಿಕೊಪ್ಪದ ಹಲವೆಡೆ ಸಾಂಪ್ರದಾಯಿಕ ಉಡುಪಿನಲ್ಲಿ ಪುರುಷರು ಮತ್ತು ಮಹಿಳೆಯರು ಗದ್ದೆಯಿಂದ ಬತ್ತದ ತೆನೆಯನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಿ ನಂತರ ಧನಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಂಡರು ನಂತರ ವಿವಿಧ ರೀತಿಯ ಭೋಜನಗಳನ್ನು ಸ್ವೀಕರಿಸಿದರು.

ಸಮೀಪದ ಗದ್ದೆಹಳ್ಳದ ಪಟ್ಟೆಮನೆ ಕುಟುಂಬಸ್ಥರು ಐನ್ ಮನೆಯಲ್ಲಿ ಸೇರಿಕೊಂಡು ಪೂಜಾ ವಿಧಿವಿಧಾನಗಳನ್ನು ನಡೆಸಿ ನಂತರ ಗದ್ದೆಗೆ ಬಂದು ತೆನೆಗೆ ಪೂಜೆ ಸಲ್ಲಿಸಿ ರಾತ್ರಿ 8.45 ಗಂಟೆಗೆ ಕದಿರು ತೆಗೆದು ಸಂಭ್ರಮಪಟ್ಟರು. ನಂತರ ಸಾರ್ವಜನಿಕರಿಗೂ ಕದಿರು ವಿತರಿಸಲಾಯಿತು.

ಸಮೀಪದ ಕೆದಕಲ್ ಭದ್ರಕಾಳಿ ದೇವಾಲಯದಲ್ಲಿ ಹುತ್ತರಿ ಹಬ್ಬಕ್ಕಾಗಿ ಮಾಡಿದ ಗದ್ದೆಯಲ್ಲಿ ತೆನೆ ತೆಗೆದು ಸಂಭ್ರಮಿಸಿದರು. ನಂತರ ದೇವಾಲಯದಲ್ಲಿ ಧನಲಕ್ಷ್ಮಿಗೆ ಪೂಜೆ ಸಲ್ಲಿಸಿ ಮನೆಗೆ ತೆರಳಲಾಯಿತು. ಅಲ್ಲದೇ, ನಾಕೂರು, ಕೆದಕಲ್, ನಾಕೂರು ಶಿರಂಗಾಲ, ಕಂಬಿಬಾಣೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಯಿತು.

ಇದೇ ವೇಳೆ ಧನು ಕಾವೇರಪ್ಪ, ರಾಕೇಶ್, ಬಿ.ಕೆ.ಮೋಹನ್, ಲಕ್ಷ್ಷಣ್, ದಿನು ದೇವಯ್ಯ, ಸುರೇಶ್ ಗೋಪಿ, ಬಿ.ಎಂ.ಸುರೇಶ್, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಲೋಕೇಶ್, ಪಟ್ಟೆಮನೆ ಅನಿಲ್ ಕುಮಾರ್ ಸೇರಿದಂತೆ ಹಲವು ಮಂದಿ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.