
ಮಡಿಕೇರಿ: ದೀರ್ಘಕಾಲದಿಂದ ಬ್ಯಾಂಕಿನ ನಿಷ್ಕ್ರಿಯ ಖಾತೆಯಲ್ಲೇ ಉಳಿದಿರುವ ಹಣವನ್ನು ಹಾಗೂ ವಿಮಾ ಖಾತೆಯಲ್ಲಿರುವ ಹಣವನ್ನು ವಾಪಸ್ ಪಡೆಯುವ ಅಭಿಯಾನ ಅಕ್ಟೋಬರ್ನಿಂದಲೇ ಆರಂಭವಾಗಿದೆ. ಆದರೆ, ಈ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸೋಮವಾರ ‘ನಿಮ್ಮ ಹಣ ನಿಮ್ಮ ಹಕ್ಕು’ ಜಾಗೃತಿ ಶಿಬಿರವನ್ನು ಏರ್ಪಡಿಸಿತ್ತು.
ಇಲ್ಲಿಯವರೆಗೆ ಕೊಡಗು ಜಿಲ್ಲೆಯಲ್ಲಿ 1.41 ಲಕ್ಷ ಮಂದಿಯ ಬ್ಯಾಂಕ್ ಖಾತೆಯಲ್ಲಿ ದೀರ್ಘಕಾಲದಿಂದ ಸುಮಾರು ₹ 33 ಕೋಟಿಯಷ್ಟು ಹಣವಿದ್ದು, ಈಗ ಅವುಗಳನ್ನು ಸುಲಭವಾಗಿ ವಾಪಸ್ ಪಡೆಯಲು ವೇದಿಕೆ ಸಿದ್ಧವಾಗಿದೆ. ಸೋಮವಾರ 10 ಮಂದಿ ತಮ್ಮ ನಿಷ್ಕ್ರಿಯ ಖಾತೆಗಳಲ್ಲಿದ್ದ ಹಣವನ್ನು ವಾಪಸ್ ಪಡೆದು ಖುಷಿಯಾದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಈ ವಿಶೇಷ ಹಾಗೂ ಅಪರೂಪದ ಶಿಬಿರಕ್ಕೆ ಚಾಲನೆ ನೀಡಿದರು.
‘ದೀರ್ಘ ಕಾಲದಿಂದ ಬ್ಯಾಂಕ್ನಲ್ಲಿರುವ ತಮ್ಮ ಹಣ ಪಡೆಯದೆ ಉಳಿದಿರುವ ಠೇವಣಿ, ವಿಮಾ ಕಂತುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರು ಹಣವನ್ನು ವಾಪಸ್ಸು ಪಡೆಯುವ ಸಂಬಂಧ ‘ನಿಮ್ಮ ಹಣ ನಿಮ್ಮ ಹಕ್ಕು’ ಜಾಗೃತಿ ಶಿಬಿರಕ್ಕೆ ಚಾಲನೆ ನೀಡಲಾಗಿದ್ದು, ಜನರು ಇದರ ಸದುಪಯೋಗ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ‘ಬ್ಯಾಂಕಿನಲ್ಲಿ 10 ವರ್ಷಕ್ಕಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಖಾತೆಯಲ್ಲಿನ ಹಣ ಮತ್ತು ಕ್ಲೈಮ್ ಮಾಡದ ಠೇವಣಿಯನ್ನು ಆರ್ಬಿಐನಿಂದ ‘ಡಿಇಎಎಫ್’ ನಿಧಿಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಗ್ರಾಹಕರು ಹಾಗೂ ಕಾನೂನುಬದ್ಧ ಉತ್ತರಾಧಿಕಾರಿಗಳು ಯಾವುದೇ ಸಮಯದಲ್ಲಿ ಹಣವನ್ನು ವಾಪಸ್ ಪಡೆಯಬಹುದು. ಆ ನಿಟ್ಟಿನಲ್ಲಿ ಎಲ್ಲೆಡೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಗ್ರಾಹಕರು ತಮ್ಮ ಗುರುತಿನ ದಾಖಲೆಗಳನ್ನು ಅರ್ಹತಾ ಪತ್ರದೊಂದಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಗಂಗಾಧರ ನಾಯಕ ಅವರು ಶಿಬಿರದ ಮಹತ್ವ ಕುರಿತು ಮಾತನಾಡಿದರು.
ಈ ಕುರಿತು ಹೊರತಂದಿರುವ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲೆಯ ವಿವಿಧ ಬ್ಯಾಂಕುಗಳು ವ್ಯವಸ್ಥಾಪಕರು, ಭಾರತೀಯ ಜೀವ ವಿಮಾ ನಿಗಮದ ಶಾಖಾ ವ್ಯವಸ್ಥಾಪಕರು ಭಾಗವಹಿಸಿದ್ದರು.
ಇನ್ನಷ್ಟು ಜಾಗೃತಿ ಮೂಡಿಸಿ
ವಿವಿಧ ಕಾರಣಗಳಿಂದ ಬ್ಯಾಂಕ್ನಲ್ಲಿ ದೀರ್ಘಕಾಲದಿಂದ ಇರುವ ಹಣ ಹಾಗೂ ವಿಮಾ ಕಂತನ್ನು ಪಡೆಯದಿರುವ ಗ್ರಾಹಕರಿಗೆ ಮಾಹಿತಿ ನೀಡಿ ಹಣವನ್ನು ವಾಪಸ್ ಪಡೆಯಲು ಹೆಚ್ಚಿನ ಅರಿವು ಮೂಡಿಸಬೇಕು. ಪ್ರತಿಯೊಬ್ಬ ಗ್ರಾಹಕರಿಗೂ ಮಾಹಿತಿ ದೊರಕುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ನೀಡಿದರು.
ಡಿ. 31ರವರೆಗೂ ಜಾಗೃತಿ ಅಭಿಯಾನ
ಆರ್ಬಿಐನ ಸಹಾಯಕ ಮಹಾಪ್ರಬಂಧಕರಾದ ನಿಶಾ ಮಾತನಾಡಿ ‘ಭಾರತ ಹಣಕಾಸು ಸಚಿವಾಲಯದ ಮಾರ್ಗಸೂಚಿ ಪ್ರಕಾರ ಎಲ್ಲಾ ಬ್ಯಾಂಕು ವಿಮೆ ಮತ್ತು ಇತರ ಇಲಾಖಾ ಶಾಖೆಗಳಲ್ಲಿ ಡಿಸೆಂಬರ್ 31ರವರೆಗೆ ಕಾನೂನು ಬದ್ಧ ವಾರಸುದಾರರಿಗೆ ಅರಿವು ಮೂಡಿಸುವ ಈ ಜಾಗೃತಿ ಕಾರ್ಯಕ್ರಮ ನಡೆಯಲಿ. ದೀರ್ಘ ಕಾಲದವರೆಗೆ ಹಕ್ಕು ಪಡೆಯದ ಹಣಕಾಸಿನ ಸ್ವತ್ತುಗಳನ್ನು ಕಾನೂನುಬದ್ಧ ವಾರಸುದಾರರಿಗೆ ಮರು ಪಡೆಯಲು ಈ ಶಿಬಿರ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.
ಖಾತೆ ಹಣದ ಬಗ್ಗೆ ಮಾಹಿತಿಗೆ ವೆಬ್ಸೈಟ್ ನೋಡಿ
ನಿಷ್ಕ್ರಿಯ ಖಾತೆಯ ವಿವರಗಳು ಹಾಗೂ ಹಣದ ಬಗ್ಗೆ ತಿಳಿಯಲು ಗ್ರಾಹಕರು https://udgam.rbi.org.in/ ವೆಬ್ಸೈಟ್ ನೋಡಬಹುದು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಗಂಗಾಧರ ನಾಯಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.